ಬೆಂಗಳೂರು: ಈಗಾಗಲೇ ನಾವು ಸುಸ್ತಾಗಿದ್ದು ಹೊಸ ಪಿಂಚಣಿ ಹಳೇ ಪಿಂಚಣಿ ಕುರಿತು ಸದ್ಯಕ್ಕೆ ಯಾವುದೇ ಚರ್ಚೆ ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸುವರ್ಣ ಮಹೋತ್ಸವ ಹಾಗೂ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಕರ ಸಂಘದ 26 ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸುತ್ತಾ ಬೆಂಗಳೂರಿನಲ್ಲಿ ಶಿಕ್ಷಕರ ಸಂಘಕ್ಕೆ ಜಾಗ ಕೊಡುವುದು ನಮ ವ್ಯಾಪ್ತಿಯಲ್ಲಿದ್ದು, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುವದಾಗಿ ಭರವಸೆ ನೀಡಿದರು. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಕೈ ಬಿಡುವಂತೆ ಶಿಕ್ಷಕರು ಬೇಡಿಕೆ ಸಲ್ಲಿಸಿರುವುದನ್ನು ಪರಿಗಣಿಸಲು ಸಾಧ್ಯವಿಲ್ಲ. ಬೇರೆಯವರು ಈ ಕೆಲಸವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಹಾಗಾಗಿ ಶಿಕ್ಷಕರೇ ಈ ಕೆಲಸ ಮಾಡಬೇಕು ಎಂದು ತಿಳಿಸಿದರು.
ಹಳ್ಳಿಗಳಿಂದ ನಗರಕ್ಕೆ ವಿದ್ಯಾರ್ಥಿಗಳು ವಲಸೆ ಬರುವುದನ್ನು ತಪ್ಪಿಸಲು, ಸ್ಥಳೀಯವಾಗಿವೆಯೇ ಮೂಲ ಸೌಕರ್ಯಗಳನ್ನು ಕಲ್ಪಿಸುವ ಅವಶ್ಯಕತೆ ಇದೆ. ಸ್ಥಳೀಯ ಶಾಲೆಗಳಿಗೆ 90 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು, ಸ್ಥಳೀಯವಾಗಿಯೇ ಸಂಬಳ ಕೊಟ್ಟು ಶಾಲೆಗಳನ್ನು ನಡೆಸಬೇಕು ಎಂದರು.
ಬಂಗಾರಪ್ಪ ಅವರು ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ನೀಡಿ ನೆರವಾಗಿದ್ದರು. ರಾಜೀವ್ ಗಾಂಧಿ ಅವರು ಕಪ್ಪುಹಲಗೆ ಯೋಜನೆ ಜಾರಿಗೆ ತಂದಿದ್ದರು. ಬೆಂಗಳೂರಿನ ವಿದ್ಯಾರ್ಥಿಗಳಿಗೆ ಸರಿಸಮನಾಗಿ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಎಂದು ಶಿಕ್ಷಕರಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.