ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿದಿದೆ. ಬೇಸಿಗೆಯ ಬಿಸಿಲಿನ ತಾಪಕ್ಕೆ ಜಲಾನಯನ ಪ್ರದೇಶಗಳಲ್ಲಿ ನೀರಿನ ಹರಿವು ನಿಂತಿದ್ದು, ಅಣೆಕಟ್ಟಿನ ಮಟ್ಟ 94 ಅಡಿಗೆ ಇಳಿಕೆಯಾಗಿದೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವ ಭೀತಿ ಎದುರಾಗಿದೆ.ಕಳೆದ ವರ್ಷ 19.50 TMC ಅಡಿ ಇದ್ದ ನೀರಿನ ಸಂಗ್ರಹ, ಈ ವರ್ಷ 18.52 TMC ಅಡಿಗೆ ಇಳಿಕೆಯಾಗಿದೆ. ಜಲಾಶಯದ ವಾಸ್ತವಿಕ 'ಲೈವ್ ಸ್ಟೋರೇಜ್' ಕೇವಲ 10 TMC ಅಡಿ ಮಾತ್ರ ಇದೆ.ನೀರಿನ ಆಳ ಕಡಿಮೆಯಾದಂತೆ ಪಾಚಿ ಬೆಳವಣಿಗೆ ಹೆಚ್ಚುತ್ತಿದೆ. ಇದು ನೀರಿನ ರುಚಿ ಕೆಡಿಸುವುದಲ್ಲದೆ, ನೀರಿನ ಮೂಲಕ ಹರಡುವ ರೋಗಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ನೀರನ್ನು ಪೂರೈಸುವ ಹಾದಿಯಲ್ಲಿ ಅಂದಾಜು 1 TMC ಅಡಿಯಷ್ಟು ನೀರು ಆವಿಯಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.ಮಳೆಯ ಕೊರತೆಯಿಂದಾಗಿ ಕೊಡಗು, ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳು ಪ್ರಸ್ತುತ ‘ರೆಡ್’ ವರ್ಗದಲ್ಲಿವೆ."ಜೂನ್ 15ರವರೆಗೆ ಈಗಿರುವ ನೀರನ್ನೇ ಅತ್ಯಂತ ಜಾಗರೂಕತೆಯಿಂದ ಬಳಸಬೇಕಿದೆ. ಮಳೆ ತಡವಾದರೆ ಪರಿಸ್ಥಿತಿ ಕೈಮೀರಬಹುದು. ಜನರು ಅನಗತ್ಯವಾಗಿ ನೀರನ್ನು ಪೋಲು ಮಾಡಬಾರದು.ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ, ಮುಂಬರುವ ಮುಂಗಾರು ಮಳೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.