ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಹಣಕ್ಕಾಗಿ ಪೀಡಿಸುತ್ತಿದ್ದ ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಚಂದ್ರೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ವಕೀಲ, ಪೊಲೀಸ್ ಅಧಿಕಾರಿ ಮತ್ತು ಮಾಧ್ಯಮ ಪ್ರತಿನಿಧಿ ಎಂದು ನಕಲಿ ಗುರುತಿನ ಚೀಟಿಗಳನ್ನು ಸೃಷ್ಟಿಸಿಕೊಂಡು ಹೆಣ್ಮಕ್ಕಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಬಂಧಿತ ಆರೋಪಿಯ ಮೊಬೈಲ್ ಪರಿಶೀಲಿಸಿದಾಗ ಪೊಲೀಸರಿಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ಸುಮಾರು 20ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ವಿಡಿಯೋಗಳು ಮತ್ತು ಫೋಟೋಗಳು ಪತ್ತೆಯಾಗಿವೆ.
ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬರಿಗೆ ತಾನು ಉಪನ್ಯಾಸಕನೆಂದು ಪರಿಚಯಿಸಿಕೊಂಡಿದ್ದ ಈತ, ತನಗೂ ವಿಚ್ಚೇದನವಾಗಿದೆ ಎಂದು ಸುಳ್ಳು ಹೇಳಿ ಮದುವೆಯಾಗುವುದಾಗಿ ನಂಬಿಸಿದ್ದ. ವಿಶ್ವಾಸ ಗಳಿಸಲು ಸಂತ್ರಸ್ತೆಯ ಕೊರಳಿಗೆ ಅರಿಶಿನದ ಕೊಂಬು ಕಟ್ಟಿ ನಾಟಕವಾಡಿದ್ದಲ್ಲದೆ, ಆಕೆಯಿಂದ 5 ಲಕ್ಷ ರೂಪಾಯಿ ಹಣವನ್ನು ಕಿತ್ತುಕೊಂಡಿದ್ದ ಎಂದು ದೂರಲಾಗಿದೆ.
ಅಷ್ಟೇ ಅಲ್ಲದೆ, ತನ್ನ ತಾಯಿಯನ್ನೂ ಸಂತ್ರಸ್ತೆಯ ಮನೆಯಲ್ಲೇ ಬಿಟ್ಟು ವರ್ಷಗಳ ಕಾಲ ಆರೈಕೆ ಮಾಡಿಸಿದ್ದನು. ಸಂತ್ರಸ್ತೆಯ ಆಧಾರ್ ಕಾರ್ಡ್ ಬಳಸಿ ತಾನೇ ಆಕೆಯ ಪತಿ ಎಂದು ಬಿಂಬಿಸಿ ಬಾಡಿಗೆ ಮನೆಯ ಕರಾರು ಪತ್ರ ಮಾಡಿಸಿದ್ದನು. ಸಾಲದ್ದಕ್ಕೆ ಆಕೆಯ ಮಗಳ ಶಾಲಾ ದಾಖಲಾತಿಗಳಲ್ಲೂ ತನ್ನ ಹೆಸರನ್ನು ಸೇರಿಸಲು ಯತ್ನಿಸಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಒಮ್ಮೆ ಆರೋಪಿಯ ಮೊಬೈಲ್ ನೋಡಿದ ಸಂತ್ರಸ್ತೆಗೆ ಆತನ ಅಸಲಿ ಮುಖವಾಡ ಬಯಲಾಗಿದ್ದು, ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಚಂದ್ರೇಗೌಡನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.