2016ರಲ್ಲಿ ನಡೆದಿದ್ದ ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಅಪರಾಧಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಇಂದು(ಏ17) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಚಿವ ಸ್ಥಾನ ಕೊನೆಗೊಳ್ಳಲಿದೆ. ಕಾನೂನು ಪ್ರಕಾರ, ಯಾವುದೇ ಶಾಸಕನ ವಿರುದ್ಧ 2 ವರ್ಷಕ್ಕಿಂತ ಹೆಚ್ಚಿನ ವರ್ಷ ಜೈಲು ಶಿಕ್ಷೆ ಪ್ರಕಟವಾದರೆ ತಕ್ಷಣವೇ ಶಾಸಕ ಸ್ಥಾನ ರದ್ದಾಗುತ್ತದೆ. ಅದರಂತೆ ಇದೀಗ ವಿನಯ್ ಕುಲಕರ್ಣಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ನಾಳೆ ವಿಧಾನಸಭಾ ಸ್ಪಿಕರ್ ಕಚೇರಿಯಿಂದ ಅಧಿಕೃತವಾಗಿ ಶಾಸಕ ಸ್ಥಾನ ರದ್ದುಮಾಡುವಂತೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸಾಮಾನ್ಯವಾಗಿ ಯಾವುದೇ ಶಾಸಕರು 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಗೆ ಗುರಿಯಾದರೆ ಅವರು ತಕ್ಷಣವೇ ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ಇನ್ನು ಜೈಲು ಶಿಕ್ಷೆಯ ಅವಧಿಯನ್ನು ಪೂರೈಸಿದ ನಂತರವೂ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶವಿರುವುದಿಲ್ಲ. ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾದ ಕಾರಣ, ಉನ್ನತ ನ್ಯಾಯಾಲಯವು ಶಿಕ್ಷೆಯನ್ನು ರದ್ದುಗೊಳಿಸದ ಹೊರತು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದು ಅಸಾಧ್ಯ. ಇನ್ನು ಶಾಸಕತ್ವ ಅಧಿಕೃತವಾಗಿ ಅನರ್ಹಗೊಂಡ ತಕ್ಷಣ ಕ್ಷೇತ್ರ ಖಾಲಿಯಾಗಲಿದೆ. ವಿಧಾನಸಭಾ ಸಚಿವಾಲಯದಿಂದ ಕ್ಷೇತ್ರ ‘ಖಾಲಿ’ ಇದೆ ಎಂದು ಘೋಷಣೆಯಾಗಲಿದ್ದು, ಬಳಿಕ ಚುನಾವಣಾ ಆಯೋಗ 6 ತಿಂಗಳ ಒಳಗೆ ಉಪಚುನಾವಣೆಯನ್ನು ನಡೆಸುವ ಸಾಧ್ಯತೆ ಇದೆ.