ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯನ್ನು ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲೇ ಎದುರಿಸಿ ಅದಿಕಾರ ಹಿಡಿಯುವುದಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ ವಾಲ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಆರ್. ಅಶೋಕ ಮತ್ತು ಛಲವಾದಿ ನಾರಾಯಣ ಸ್ವಾಮಿ ಅವರು ಭ್ರಷ್ಟ ಸರ್ಕಾರವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಸದನದ ಒಳಗೆ ಮತ್ತು ಹೊರಗೆ ಈ ಮೂವರ ತಂಡ ಸರ್ಕಾರ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸುತ್ತಿದೆ. ಈ ಸಂಘರ್ಷ ನಿರಂತರವಾಗಿರಬೇಕು. ಮುಂಬರುವ ವಿಧಾನಸಭಾ ಉಪ ಚುನಾವಣೆಗಳು, ವಿಧಾನಪರಿಷತ್, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗೆಲ್ಲಬೇಕು. ಇದಕ್ಕೆ ಸಂಘಟಿತ ಪ್ರಯತ್ನ ಇರಬೇಕು ಎಂದು ಅವರು ಸಲಹೆ ನೀಡಿದರು.
ರಾಜ್ಯ ಸರ್ಕಾರ ರೋಹಿತ್ ವೇಮುಲಾ ಮಸೂದೆಯಲ್ಲಿ ಎಸ್ ಸಿ ಎಸ್ ಟಿ ಜತೆಗೆ ಮುಸ್ಲಿಮರನ್ನೂ ಸೇರಿಸಿದೆ. ಇದು ಸಾಮಾಜಿಕ ಸಾಮರಸ್ಯ ಹದಗೆಡಲು ಕಾರಣ ಆಗುತ್ತದೆ. ಎಸ್ ಸಿ ಮತ್ತು ಎಸ್ ಟಿಗಳಿಗೆ ಮಾತ್ರ ಈ ಕಾಯ್ದೆ ಅನ್ವಯ ಆಗಬೇಕು ಎಂದು ಅವರು ತಿಳಿಸಿದರು.
ಅಗರ್ ವಾಲ್ ಹೇಳಿಕೆ ಗಮನಿಸಿದರೆ ಮುಂದಿನ ಚುನಾವಣೆವರೆಗೆ ಅವರೇ ರಾಜ್ಯ ಅಧ್ಯಕ್ಷರಾಗಿ ಮುಂದುವರೆಯುವ ಲಕ್ಷಣಗಳು ಗೋಚರಿಸುತ್ತಿವೆ. ಇದರಿಂದ ಪಕ್ಷದ ಅದ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರಿಗೆ ನಿರಾಶೆಯಾದಂತಾಗಿದೆ.