ಬೆಂಗಳೂರು: ಮುಂಬರುವ ಬಜೆಟ್ ನಲ್ಲಿ ಹಿಂದುಳಿದ ಸಮುದಾಯ, ಪರಿಶಿಷ್ಟ ಜಾತಿ, ಪಂಗಡದವರಿಗೆ ಹೆಚ್ಚು ಅನುದಾನ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಇಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯಡಿಯೂರಪ್ಪ ಅವರು ಬಿಜೆಪಿ ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ಸಮುದಾಯ, ಪರಿಶಿಷ್ಟ ಜಾತಿ, ಪಂಗಡದವರಿಗೆ 550 ಕೋಟಿ ಅನುದಾನ ನೀಡಿದ್ದರು. ಈ ಬಜೆಟ್ನಲ್ಲಾದರೂ, ಹಿಂದುಳಿದ ಸಮುದಾಯ, ಪರಿಶಿಷ್ಟ ಜಾತಿ, ಪಂಗಡದವರಿಗೆ ಕನಿಷ್ಠ 2500- 3 ಸಾವಿರ ಕೋಟಿ ಅನುದಾನ ಕೊಡಬೇಕು ಎಂದು ಆ ಸಮುದಾಯಗಳ ಪರವಾಗಿ ಬೇಡಿಕೆ ಮಂಡಿಸಿದರು.
ಸಿದ್ದರಾಮಯ್ಯನವರನ್ನು ಅವರ ಪಕ್ಷದಲ್ಲೇ ಕಾಲೆಳೆಯುತ್ತಿದ್ದಾರೆ. ಕುರಿ ಕಾಯುವ ಸಮುದಾಯದವರು ರಾಜ್ಯದ ಮುಖ್ಯಮಂತ್ರಿ ಆಗಿರುವುದು ಸಂತೋಷದ ವಿಚಾರ. ಸಿದ್ದರಾಮಯ್ಯನವರು ಅಹಿಂದ ಹೆಸರು ಹೇಳಿಕೊಂಡು ಮುಖ್ಯಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ. ಆ ಸಮುದಾಯಗಳ ಬೆಂಬಲಕ್ಕೆ ನಿಲ್ಲಬೇಕು ಎಂದರು.
ಕುರಿಗಳ ಆಕಸ್ಮಿಕ ಸಾವಿನ ಸಂಬಂಧದ ಪರಿಹಾರ ಧನ ರೂ. 48 ಕೋಟಿಯನ್ನು ಅನುಗ್ರಹ ಯೋಜನೆಯಡಿ ಇವತ್ತಿಗೂ ಬಾಕಿ ಉಳಿಸಿಕೊಂಡಿದೆ. ಸರ್ಕಾರ ಅಷ್ಟೊಂದು ದಿವಾಳಿ ಆಗಿದೆಯೇ? ಖಜಾನೆ ಖಾಲಿ ಆಗಿದೆಯೇ? ಎಂದು ಪ್ರಶ್ನಿಸಿದರು. ಒಂದು ತಿಂಗಳಿಂದ ಒತ್ತಾಯಿಸುತ್ತಿದ್ದರೂ ಆ ಬಡ ಕುಟುಂಬಗಳಿಗೆ ಹಣ ಬಿಡುಗಡೆ ಮಾಡಿಲ್ಲ. 90 ಸಾವಿರ ಕುರಿ, ಮೇಕೆಗಳು ಸತ್ತಿವೆ. ಕೇವಲ 30 ಸಾವಿರ ಕುರಿ, ಮೇಕೆಗಳಿಗೆ ಪರಿಹಾರ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕುರ್ಚಿ ಅಲ್ಲಾಡುವಾಗ ಸಿದ್ದರಾಮಯ್ಯ ಅವರಿಗೆ ಸಮಾಜ ನೆನಪಾಗುತ್ತದೆ. ಸಮಾಜದ ಬಡವರು ತೊಂದರೆಯಲ್ಲಿದ್ದಾರೆ. ಅವರ ಸಮಸ್ಯೆಗೆ ಪರಿಹಾರ ನೀಡಲು ನೀವು ತಯಾರಿಲ್ಲ. ಇದನ್ನೇ ತಮ್ಮ ಸಮಾಜ ಪ್ರಶ್ನಿಸುತ್ತಿದೆ ಎಂದು ಹೇಳಿದರು.