ಚಿಕ್ಕಬಳ್ಳಾಪುರ: ನಂದಿನಿ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ (ಚಿಮುಲ್) ಉತ್ತಮ ಲಾಭ ಗಳಿಸಿದ್ದು, ಅದರ ಲಾಭವನ್ನು ರೈತರಿಗೆ ಹಂಚಲು ಮುಂದಾಗಿದೆ.
ಚಿಮುಲ್ ಪ್ರಸ್ತುತ ಸುಮಾರು 2 ಕೋಟಿ ರೂಪಾಯಿ ಲಾಭದಲ್ಲಿದ್ದು, ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ಲೀಟರ್ ಹಾಲಿನ ಮೇಲೆ 1.50 ರೂಪಾಯಿ ಹೆಚ್ಚುವರಿ ದರ ನೀಡಲು ನಿರ್ಧರಿಸಲಾಗಿದೆ ಎಂದು ಚಿಮುಲ್ ಅಧ್ಯಕ್ಷ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ.
ಈ ಹೆಚ್ಚುವರಿ ದರವನ್ನು ಮುಂದಿನ ಮೇ ತಿಂಗಳವರೆಗೆ ರೈತರಿಗೆ ನೀಡಲಾಗುತ್ತದೆ. ಈಗಾಗಲೇ ಒಕ್ಕೂಟದಿಂದ ಪ್ರತಿ ಲೀಟರ್ ಹಾಲಿಗೆ 36 ರೂಪಾಯಿ 90 ಪೈಸೆ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರದ 5 ರೂಪಾಯಿ ಸಬ್ಸಿಡಿ ಸೇರಿ ಒಟ್ಟು 41 ರೂಪಾಯಿ 90 ಪೈಸೆ ರೈತರಿಗೆ ಸಂದಾಯವಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲೇ ಅತಿ ಹೆಚ್ಚು ಹಾಲಿನ ದರ ನೀಡುತ್ತಿರುವ ಒಕ್ಕೂಟಗಳಲ್ಲಿ ಚಿಮುಲ್ ಕೂಡ ಒಂದಾಗಿದೆ. ಈಗ ಹೆಚ್ಚುವರಿ 1.50 ರೂಪಾಯಿ ನೀಡುವ ನಿರ್ಧಾರದಿಂದ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಮತ್ತಷ್ಟು ಪ್ರೋತ್ಸಾಹ ಸಿಗಲಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.