ತುಕಾಲಿ ಸಂತೋಷ್ ಮತ್ತು ಪತ್ನಿ ಮಾನಸಾ ಸೇರಿ ಹೊಸ ಮನೆ ಕಟ್ಟಿಸಿದ್ದಾರೆ. ಬಹು ಮಹಡಿಯ ಐಷಾರಾಮಿ ಮನೆ ಇದು. ಅದ್ದೂರಿಯಾಗಿ, ಶಾಸ್ತ್ರೋಕ್ತವಾಗಿ ನಿನ್ನೆ ಮಾರ್ಚ್ 6 ರಂದು ಗೃಹಪ್ರವೇಶ ನೆರವೇರಿಸಿದ್ದಾರೆ. ಕಾಮಿಡಿ ಕಿಲಾಡಿಗಳು-ಸೀಸನ್ 3’ರ ಮೂಲಕ ವೀಕ್ಷಕರಿಗೆ ಪರಿಚಯವಾದ ಸಂತೋಷ್ ಅವರು, ತುಕಾಲಿ ಸಂತು ಎಂದೇ ಜನಪ್ರಿಯತೆ ಪಡೆದಿದ್ದಾರೆ.
ನಂತರ ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿ ಆಗಿ ಟಾಪ್- 6 ಸ್ಪರ್ಧಿ ಆಗಿದ್ದರು. ಸದ್ಯ ‘ಗಿಚ್ಚಿ-ಗಿಲಿಗಿಲಿ ಜೂನಿಯರ್ಸ್’ ಶೋನಲ್ಲಿ ಮೆಂಟರ್ ಆಗಿದ್ದಾರೆ. ಇವರ ಪತ್ನಿ ಮಾನಸಾ ಅವರು ಕೂಡ ಪತಿ ಹಾದಿಯನ್ನೇ ತುಳಿದಿದ್ದು, ಸ್ಪಾಟ್ನಲ್ಲೇ ಅರಳು ಹುರಿದಂತೆ ಮಾತನಾಡಿ ಕಾಮಿಡಿ ಕಿಲಾಡಿಗಳು ಶೋಗೆ ಕಾಲಿಟ್ಟರು. ಇದಕ್ಕೂ ಮೊದಲು ಜೋಡಿಯಾಗಿ ‘ಜೋಡಿ ನಂಬರ್ ಒನ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.
ನಂತರ ಇವರು ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿದರು. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತಮ್ಮದೇ ರೀತಿ ಛಾಪು ಮೂಡಿಸಿದ್ರು. ಸದ್ಯ ದಂಪತಿ ಶ್ರಮಕ್ಕೆ ಫಲ ಸಿಕ್ಕಿದ್ದು, ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದೂರು ಹೊಸಹಳ್ಳಿಯಲ್ಲಿ ಮನೆ ಕಟ್ಟಿಸಿದ್ದಾರೆ. ಮನೆಗೆ ‘ಮನಸಂತೋಷ ನಿಲಯಾʼ ಎಂದು ತಮ್ಮಿಬ್ಬರ ಹೆಸರನ್ನ ಕಾಂಬಿನೇಷನ್ ಮಾಡಿ ಹೆಸರಿಟ್ಟಿದ್ದಾರೆ ತುಕಾಲಿ ಸಂತೋಷ್ ಮಾನಸಾ ದಂಪತಿ.