ಬೆಂಗಳೂರು: ಶೌಚಾಲಯಕ್ಕೆ ತೆರಳಿದ್ದ ಯುವತಿಯ ವಿಡಿಯೋ ಮಾಡಲು ವ್ಯಕ್ತಿಯೊಬ್ಬ ಯತ್ನಿಸಿದ ಘಟನೆ ಬೆಂಗಳೂರಿನ ಮಲ್ಲೇಶ್ವರಂನ ಪ್ರತಿಷ್ಠಿತ ಕೆಫೆಯೊಂದರಲ್ಲಿ ಗುರುವಾರ ನಡೆದಿದೆ. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಕೆಫೆಯಲ್ಲಿ ಈ ಘಟನೆ ನಡೆದಿದೆ. ಕೆಫೆಗೆ ಹೋಗಿದ್ದ ಯುವತಿ ರಾತ್ರಿ 8.30 ರ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದ ವೇಳೆ ಪಕ್ಕದಲ್ಲಿರುವ ಪುರುಷರ ಶೌಚಾಲಯದಿಂದ ಆರೋಪಿಯೊಬ್ಬ ಕೈ ಮೇಲಕ್ಕೆ ಎತ್ತಿ ಮೊಬೈಲ್ ಮೂಲಕ ಯುವತಿಯ ವಿಡಿಯೋ ಮಾಡಲು ಯತ್ನಿಸಿದ್ದಾನೆ. ಇದನ್ನು ನೋಡಿದ ಯುವತಿ ಜೋರಾಗಿ ಕೂಗಾಡಿದ್ದಾಳೆ. ಗಾಬರಿಯಾದ ಯುವಕ ಮೊಬೈಲ್ ಬೀಳಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಹಿಡಿಯಲು ಯತ್ನಿಸಿದರೂ ಸಿಗದೇ ಆರೋಪಿ ಪರಾರಿಯಾಗಿದ್ದು, ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿದ್ದಾರೆ.
ಮಾಲೀಕನ ಹೆಸರಲ್ಲಿ ಚಿನ್ನದ ಸರ ಪಡೆದು ವಂಚನೆ - ಐದು ತಿಂಗಳ ಬಳಿಕ ಆರೋಪಿ ಸೆರೆ.!
ಬೆಂಗಳೂರಿನಲ್ಲಿ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನು ಮಾಲೀಕನ ಹೆಸರನ್ನು ದುರುಪಯೋಗಪಡಿಸಿಕೊಂಡು ಚಿನ್ನದ ಸರಗಳನ್ನು ಪಡೆದು ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಭಾರತೀನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಜಸ್ಥಾನ ಮೂಲದ ಧರ್ಮವೀರ್ ಸಿಂಗ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಚಿನ್ನದ ಆಭರಣಗಳನ್ನು ಸಾಗಿಸುವ ಕೆಲಸ ಮಾಡುತ್ತಿದ್ದ ಕಾರಣ, ಆಭರಣ ಎಕ್ಸ್ಚೇಂಜ್ ಪ್ರಕ್ರಿಯೆಯ ಬಗ್ಗೆ ಅವನಿಗೆ ಚೆನ್ನಾಗಿ ತಿಳಿದಿತ್ತು.
ಇದನ್ನೇ ದುರುಪಯೋಗಪಡಿಸಿಕೊಂಡ ಆರೋಪಿ, ಜ್ಯುವೆಲ್ಲರಿ ಅಂಗಡಿಯ ಮಾಲೀಕ ಹೈದರಾಬಾದ್ಗೆ ಹೋಗಿದ್ದ ಸಮಯದಲ್ಲಿ ವಂಚನೆಗೆ ಮುಂದಾಗಿದ್ದನು. ಮಾಲೀಕನ ಹೆಸರನ್ನು ಹೇಳಿಕೊಂಡು ಮತ್ತೊಂದು ಅಂಗಡಿಯಾದ ಮಹಾವೀರ್ ಜ್ಯುವೆಲ್ಲರಿಯಲ್ಲಿ ಸುಮಾರು 9 ಲಾಂಗ್ ಚೈನ್ಗಳನ್ನು ಪಡೆದುಕೊಂಡಿದ್ದಾನೆ.
ಚಿನ್ನದ ಸರಗಳನ್ನು ಪಡೆದುಕೊಂಡ ಬಳಿಕ ಆರೋಪಿ ರಾಜಸ್ಥಾನಕ್ಕೆ ಪರಾರಿಯಾಗಿದ್ದು, ಸುಮಾರು ಐದು ತಿಂಗಳ ಕಾಲ ಪೊಲೀಸರ ಕಣ್ಣಪ್ಪಿಸಿ ತಲೆಮರೆಸಿಕೊಂಡಿದ್ದನು. ಇತ್ತೀಚೆಗೆ ಆರೋಪಿಯ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಅವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ ಸುಮಾರು 240 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಆರು ಲಾಂಗ್ ಸರಗಳೂ ಸೇರಿವೆ. ಈ ಸಂಬಂಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.
ಬಿಲ್ಡರ್ ಕಚೇರಿಯಲ್ಲಿ 91 ಲಕ್ಷ ರೂ. ಕಳ್ಳತನ ಕೇಸ್ - ಸಿಬ್ಬಂದಿ ಸೇರಿ ಇಬ್ಬರು ಅರೆಸ್ಟ್.!
ಬೆಂಗಳೂರಿನಲ್ಲಿ ಬಿಲ್ಡರ್ ಕಚೇರಿಯಲ್ಲಿ ನಡೆದಿದ್ದ ಲಕ್ಷಾಂತರ ರೂಪಾಯಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬನು ತನ್ನ ಸ್ನೇಹಿತರ ಜೊತೆಗೂಡಿ ಸುಮಾರು 91 ಲಕ್ಷ ರೂಪಾಯಿ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಸದಾಶಿವನಗರ ವ್ಯಾಪ್ತಿಯ ಬಿಇಎಲ್ ರಸ್ತೆಯಲ್ಲಿರುವ ಬಿಲ್ಡರ್ ಕಚೇರಿಯಲ್ಲಿ ಫೆಬ್ರವರಿ 20ರಂದು ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಕಚೇರಿಯ ಸಿಬ್ಬಂದಿ ಧನಂಜಯ್ ಹಾಗೂ ಅವನ ಸ್ನೇಹಿತ ಪ್ರವೀಣ್ ಅವರನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳಾದ ತಿಪ್ಪೇಶ್ ಮತ್ತು ಸುನೀಲ್ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.