ದೆಹಲಿ: ವಂದೇ ಮಾತರಂ ಗೀತೆಗೆ ಬುನಾದಿ ಹಾಕಿಕೊಟ್ಟಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು. ಈ ದೇಶದ ಸೇವೆ ಮಾಡಿದ ಪಕ್ಷ ನಮ್ಮದು. ಈಗ ಬಿಜೆಪಿ ಮತ್ತಿತರ ಪಕ್ಷಗಳು ನಮ್ಮನ್ನು ಅನುಸರಿಸುತ್ತಿವೆ. ನಮಗೆ ಅದೇ ಸಂತೋಷ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು. ವಂದೇ ಮಾತರಂ ಕಡ್ಡಾಯಗೊಳಿಸಿರುವ ಬಗ್ಗೆ ಕೇಳಿದಾಗ, ನಮ್ಮ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡುವಾಗ ಪ್ರತಿಹಂತದಲ್ಲೂ ವಂದೇ ಮಾತರಂ ಗೀತೆ ಹಾಡುತ್ತೇವೆ. ನಾವು ವಂದೇ ಮಾತರಂ ಗೀತೆಗೆ ಗೌರವ ನೀಡುತ್ತೇವೆ. ಅದನ್ನು ಅನುಸರಿಸುತ್ತೇವೆ ಎಂದು ಉತ್ತರಿಸಿದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಷ್ಟ್ರಕವಿ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಹಾಡನ್ನು ರಾಜ್ಯಗೀತೆಯಾಗಿ ಕಡ್ಡಾಯ ಮಾಡಿದ್ದೇವೆ. ಕುವೆಂಪು ಅವರು ಸರ್ವಜನಾಂಗದ ಶಾಂತಿಯ ತೋಟ ಎಂದು ಬರೆದಿದ್ದಾರೆ. ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟ. ಹಿಂದೂ, ಕ್ರೈಸ್ತ, ಮುಸಲ್ಮಾನ ಎಂದು ಹಾಡಿನಲ್ಲಿಯೇ ಇದೆ. ಅಂತಹ ರಾಜ್ಯ, ಭೂಮಿಯಲ್ಲಿ ಬೆಳೆದವರು ನಾವು ಎಂದರು.
ಸಿದ್ದರಾಮಯ್ಯ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಡಿ.ಕೆ.ಸುರೇಶ್ ಅವರ ಹೇಳಿಕೆ ಕುರಿತು ಉತ್ತರಿಸಿದ ಅವರು, ಕಾಲವೇ ಉತ್ತರ ನೀಡುತ್ತದೆ ಎಂದು ಹೇಳಿದ್ದೇನೆ. ನಾವುಗಳು ಏನು ಮಾತನಾಡಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತು ಎಂದರು.
ಕಾಲ ಯಾವಾಗ ಬರಲಿದೆ ಎಂದು ಕೇಳಿದಾಗ, ಇದಕ್ಕೂ ಸಮಯ ನೋಡಿ ಹೇಳುತ್ತೇನೆ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಕಾಂಗ್ರೆಸ್ ಕಚೇರಿಗೆ ಹೋಗಿ ಬಂದಿದ್ದೇನೆ ಅಷ್ಟೇ. ನಾನು ಅಸ್ಸಾಂ ಚುನಾವಣೆ ಜಂಜಾಟದಲ್ಲಿ ಇದ್ದೇನೆ ಎಂದು ತಿಳಿಸಿದರು