ಕೋಲ್ಕತ್ತಾ: ಕೆಲವೇ ತಿಂಗಳಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮೂರು ದಿನಗಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಲವು ಉಚಿತ ಕೊಡುಗೆಗಳನ್ನು ಘೋಷಿಸಿದ್ದರು. ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ನಿರುದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ಪ್ರಕಟಿಸಿದ್ದಾರೆ.
10ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವ ಉದ್ಯೋಗಾಕಾಂಕ್ಷಿಗಳಿಗೆ ಪ್ರತಿ ತಿಂಗಳು 1,500 ರೂ. ಭತ್ಯೆ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಎಸ್ ಐಆರ್ ವಿರೋಧಿಸಿ ಧರಣಿ ನಡೆಯುತ್ತಿರುವ ಸ್ಥಳದಿಂದಲೇ ಅವರು ಈ ಘೋಷಣೆ ಮಾಡಿದ್ದು ಇಂದಿನಿಂದಲೇ ಜಾರಿಗೆ ಬರಲಿದೆ.
"ಯುವ ಸಾಥಿ” ವಿಷಯದಲ್ಲಿ, ಇನ್ನೂ ಓದುತ್ತಿರುವ ಮತ್ತು ವಿದ್ಯಾರ್ಥಿವೇತನವನ್ನು ಹೊರತುಪಡಿಸಿ ಇತರ ಯಾವುದೇ ಯೋಜನೆಗಳ ಫಲಾನುಭವಿಗಳಲ್ಲದ ನಿರುದ್ಯೋಗಿಗಳಿಗೆ 1500 ಭತ್ಯೆ ನೀಡಲಾಗುತ್ತದೆ. ಏಪ್ರಿಲ್ 1 ರಿಂದ ಈ ಯೋಜನೆ ಜಾರಿಗೆ ಬರಲಿದೆ ಎಂದು ಮೊದಲೇ ಹೇಳಿದ್ದೆವು. ಆದರೆ ನಾಳೆ ಅಂತರರಾಷ್ಟ್ರೀಯ ಮಹಿಳಾ ದಿನವಾಗಿದ್ದು, ಇದರ ಉಡುಗೊರೆಯಾಗಿ, ನಾಳೆಯಿಂದಲೇ ಜಾರಿಗೆ ಬರಲಿದೆ ಎಂದರು.
21 ರಿಂದ 40 ವರ್ಷ ವಯಸ್ಸಿನ ಸುಮಾರು 1 ಕೋಟಿ ಜನ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ವಿದ್ಯಾರ್ಥಿವೇತನವನ್ನು ಹೊರತುಪಡಿಸಿ ಬೇರೆ ಯಾವುದೇ ಯೋಜನೆಗಳ ಫಲಾನುಭವಿಗಳಲ್ಲ ಎಂದು ಮಮತಾ ಬ್ಯಾನರ್ಜಿತಿಳಿಸಿದರು.
ತಮ್ಮ ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದು, ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 40 ರಷ್ಟು ಕಡಿಮೆಯಾಗಿದೆ. ಸರ್ಕಾರ ಕನಿಷ್ಠ 40 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡಿದ್ದು, ಅದರಲ್ಲಿ ಸುಮಾರು 10 ಲಕ್ಷ ಜನ ಈಗಾಗಲೇ ಉದ್ಯೋಗ ಪಡೆದುಕೊಂಡಿದ್ದಾರೆ ಎಂದರು.