ಬೆಂಗಳೂರು : ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಅವರು ನಿಧನ ಹೊಂದಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತು ಮಾತನಾಡಿರುವ ಉಮಾಶ್ರೀ ಅವರು, ಈ ರೀತಿಯ ಸುದ್ದಿ ಆಗಾಗ್ಗೆ ಬೇಕೆಂದೇ ಕಿಡಿಕೇಡಿಗಳು ಹರಿಬಿಡುತ್ತಿದ್ದಾರೆ. ಇದರಿಂದ ಅವರಿಗೆ ಲೈಕ್ ಮತ್ತು ಶೇರ್ ಗಳು ಸಿಗಬಹುದೇ ಹೊರತು ಇನ್ನೇನೂ ಸಿಗಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ. ಈ ರೀತಿಯ ಕೃತ್ಯಗಳಿಂದ ಅಭಿಮಾನಿಗಳಲ್ಲಿ ಆತಂಕ ಹೆಚ್ಚುತ್ತದೆ. ಆದ್ದರಿಂದ ಅಭಿಮಾನಿಗಳು ಈ ಪೋಸ್ಟ್ ಗಳನ್ನು ಹೆಚ್ಚಾಗಿ ಶೇರ್ ಮಾಡುತ್ತಾರೆ. ಈ ಅಭಿಮಾನವನ್ನೇ ಬಂಡವಾಳವಾಗಿರಿಸಿಕೊಂಡು ಕಿಡಿಗೇಡಿಗಳು ಈ ರೀತಿಯ ಕೃತ್ಯವೆಸಗುತ್ತಿದ್ದಾರೆ ಎಂದು ಉಮಾಶ್ರೀ ವಿಷಾದ ವ್ಯಕ್ತಪಡಿಸಿದ್ದಾರೆ.
ನಾನು ಸಂಪೂರ್ಣ ಆರೋತ್ಯವಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಅಭಿಮಾನಿಗಳ ಕಾಳಜಿಗೆ ಕೃತಜ್ಞಳಾಗಿದ್ದೇನೆ. ಈ ರೀತಿಯ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಇಂಥವರನ್ನು ನಿರ್ಲಕ್ಷಿಸುವುದೇ ಉತ್ತಮ ಎಂದಿದ್ದಾರೆ. ಈ ಸುಳ್ಳು ಪೋಸ್ಟ್ ಗೆ ನೆಟ್ಟಿಗರು ಮತ್ತು ಅಭಿಮಾನಿಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಪೋಸ್ಟ್ ಹಾಕಿರುವವರನ್ನು ಅವಾಚ್ಯ ಶಬ್ದಗಳಲ್ಲಿ ಕಟುವಾಗಿ ನಿಂದಿಸಿದ್ದಾರೆ. ಈ ರೀತಿಯ ಕೃತ್ಯಗಳ ವಿರುದ್ದ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.