ಕಬ್ಬನ್ ಪಾರ್ಕ್ನಲ್ಲಿ ಸುಮಾರು 20 ದಿನಗಳ ಹಿಂದೆ ನಡೆದಿದ್ದ ವ್ಯಕ್ತಿಯೋರ್ವನ ಆತ್ಮಹತ್ಯೆ ಪ್ರಕರಣವು ಇದೀಗ ಭೀಕರ ಹತ್ಯೆಯ ಸಂಚು ಮತ್ತು ಕಿರುಕುಳದ ಕಥೆಯನ್ನು ಹೊರಹಾಕಿದೆ. ಮೃತ ವ್ಯಕ್ತಿಯನ್ನು ರಾಜಸ್ಥಾನ ಮೂಲದ ಸುರೇಶ್ ಕುಮಾರ್ ಪುರೋಹಿತ್ ಎಂದು ಗುರುತಿಸಲಾಗಿದೆ.ರಾಜಸ್ಥಾನದಲ್ಲಿ ಜಬರರಾಮ್ ಎಂಬಾತನೊಂದಿಗೆ ಸುರೇಶ್ ಕುಮಾರ್ ಜಗಳ ಮಾಡಿಕೊಂಡಿದ್ದರು. ಈ ಜಗಳ ವಿಕೋಪಕ್ಕೆ ಹೋಗಿ ಪರಸ್ಪರ ಹಲ್ಲೆ ನಡೆದಿದ್ದವು. ನಂತರ ಜಬರರಾಮ್, ತನ್ನ ಬೆಂಗಳೂರಿನ ಸ್ನೇಹಿತರ ಮೂಲಕ ಸುರೇಶ್ ಕುಮಾರ್ಗೆ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದ.
ಸುರೇಶ್ ಕುಮಾರ್ ಬೆಂಗಳೂರಿಗೆ ಬಂದಿದ್ದನ್ನು ತಿಳಿದು, ಮಾರ್ಚ್ ಅಂತ್ಯದಲ್ಲಿ ಜಬರರಾಮ್ ಕೂಡ ನಗರಕ್ಕೆ ಆಗಮಿಸಿದ್ದ. ಪ್ರವೀಣ್, ಭಾವೇಶ್, ನಿತೇಶ್ ಮತ್ತು ಮುಖೇಶ್ ಎಂಬುವವರಿಗೆ ಸುರೇಶ್ ಮೇಲೆ ಹಲ್ಲೆ ನಡೆಸಲು ಸೂಚಿಸಿದ್ದ. ಅದರಂತೆ ಆರೋಪಿಗಳು ಸುರೇಶ್ ಮೇಲೆ ಹಲ್ಲೆ ಕೂಡ ನಡೆಸಿದ್ದರು.ನಿರಂತರ ಹಲ್ಲೆ, ಕೊಲೆ ಬೆದರಿಕೆ ಮತ್ತು ಮಾನಸಿಕ ಕಿರುಕುಳದಿಂದ ಮನನೊಂದ ಸುರೇಶ್ ಕುಮಾರ್, ಕಬ್ಬನ್ ಪಾರ್ಕ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತನ ಸಹೋದರ ವಾಸನರಾಮ್ ನೀಡಿದ ದೂರಿನ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಜಬರರಾಮ್ ಸೇರಿದಂತೆ ಒಟ್ಟು ಐವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಕ್ಷುಲ್ಲಕ ವಿಚಾರಕ್ಕೆ ಶುರುವಾದ ಗಲಾಟೆ ಇದೀಗ ಯುವಕನ ಸಾವಿನಲ್ಲಿ ಅಂತ್ಯವಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.