ರಾಜಧಾನಿ ಬೆಂಗಳೂರಿನಿಂದ ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ತುಮಕೂರು ರಸ್ತೆ ಫ್ಲೈಓವರ್ (ಪೀಣ್ಯ ಮೇಲ್ಸೇತುವೆ) ಮುಂದಿನ ವಾರ ಸಂಚಾರಕ್ಕೆ ಬಂದ್ ಆಗುವ ಸಾಧ್ಯತೆಯಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಈ ಮೇಲ್ಸೇತುವೆಗೆ ಹೊಸದಾಗಿ 1,422 ಕೇಬಲ್ಗಳನ್ನು ಅಳವಡಿಸಿದ್ದು, ಅವುಗಳ ಅಂತಿಮ 'ಲೋಡ್ ಟೆಸ್ಟಿಂಗ್' ಅಥವಾ ಸಾಮರ್ಥ್ಯ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲು ಪ್ರಾಧಿಕಾರವು ಬೆಂಗಳೂರು ಸಂಚಾರ ಪೊಲೀಸರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಒಂದು ವೇಳೆ ಸಂಚಾರ ಪೊಲೀಸರು ಅನುಮತಿ ನೀಡಿದರೆ, ಏಪ್ರಿಲ್ 13ರ ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ಏಪ್ರಿಲ್ 17ರ ಶುಕ್ರವಾರ ಬೆಳಿಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಸಂಪೂರ್ಣವಾಗಿ ಬಂದ್ ಆಗಲಿದೆ. ಸುಮಾರು 82 ಗಂಟೆಗಳ ಕಾಲ ಈ ಪರೀಕ್ಷೆ ನಡೆಯಲಿದ್ದು, ಈ ಅವಧಿಯಲ್ಲಿ ವಾಹನ ಸವಾರರು ಮೇಲ್ಸೇತುವೆಯ ಬದಲಿಗೆ ಕೆಳಗಿನ ರಸ್ತೆಯನ್ನೇ ಬಳಸಬೇಕಾಗುತ್ತದೆ. 2010ರಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದ್ದ ಈ ಮೇಲ್ಸೇತುವೆಯು ನಗರದ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
ಈ ಐದು ದಿನಗಳ ಕಾಲ ಫ್ಲೈಓವರ್ ಬಂದ್ ಆಗುವುದರಿಂದ ಗೊರಗುಂಟೆಪಾಳ್ಯದಿಂದ ಪೀಣ್ಯದವರೆಗೆ ಭಾರಿ ಟ್ರಾಫಿಕ್ ಜಾಮ್ ಉಂಟಾಗುವ ಆತಂಕ ಎದುರಾಗಿದೆ. ಸಾವಿರಾರು ವಾಹನಗಳು ಕೆಳಗಿನ ರಸ್ತೆಯಲ್ಲೇ ಸಂಚರಿಸಬೇಕಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಲಿದ್ದು, ಸವಾರರು ಹೆಚ್ಚಿನ ಸಮಯ ವ್ಯಯಿಸಬೇಕಾಗಬಹುದು. ಪೊಲೀಸರು ಅಧಿಕೃತವಾಗಿ ಅನುಮತಿ ನೀಡಿದ ನಂತರವಷ್ಟೇ ಈ ಬದಲಾವಣೆಗಳು ಜಾರಿಗೆ ಬರಲಿವೆ.