ಚೆನ್ನೈ: ‘ತಮಿಳಿಗ ವೆಟ್ರಿ ಕಳಗಂ (ಟಿವಿಕೆ)’ ಪಕ್ಷದ ಸಂಸ್ಥಾಪಕ, ಖ್ಯಾತ ನಟ ವಿಜಯ್ ಅವರು ತಮ್ಮ ಕುಟುಂಬದ ಬಗ್ಗೆ ಗಮನ ನೀಡಬೇಕು ಮತ್ತು ತ್ರಿಷಾ ಅವರ ಗುಂಗಿನಿಂದ ಹೊರಬರಬೇಕು ಎಂದು ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ.
ಬಿಜೆಪಿ ಮುಖಂಡನ ಹೇಳಿಕೆಗೆ ನಟಿ ತ್ರಿಷಾ ಕೆಂಡಾಮಂಡಲವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಜಯ್ ಜತೆಗೆ ತಮ್ಮ ಹೆಸರನ್ನು ಉಲ್ಲೇಖಿಸಿರುವುದಕ್ಕೆ ತ್ರಿಷಾ ಅವರು ತಮ್ಮ ವಕೀಲರ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ತಮಿಳುನಾಡಿನ ತಿರುನೆಲ್ವೇಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ನಾಗೇಂದ್ರನ್ ಅವರು ತಮಿಳುನಾಡಿನ ರಾಜಕೀಯದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಅಂತಹವರು ಈ ರೀತಿಯ ಅಸಹ್ಯ ಮತ್ತು ಅಸಭ್ಯ ಮಾತುಗಳನ್ನು ಆಡಬಾರದು ಎಂದು ತಿರುಗೇಟು ನೀಡಿದ್ದಾರೆ.
ತ್ರಿಷಾ ಅವರು ಆರಂಭದಿಂದಲೂ ರಾಜಕೀಯದಲ್ಲಿ ತಟಸ್ಥರಾಗಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಜತೆ ಗುರುತಿಸಿಕೊಂಡಿಲ್ಲ. ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚಾಗಿ ವೃತ್ತಿಪರ ಕೆಲಸದಲ್ಲಿ ಮಾತ್ರ ಅವರು ತಮ್ಮ ಹೆಸರನ್ನು ಉಲ್ಲೇಖಿಸಲು ಬಯಸುತ್ತಾರೆ. ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವವರು ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು. ವೈಯಕ್ತಿಕ ಜೀವನವು ಸಾರ್ವಜನಿಕ ಚರ್ಚೆಯ ವಿಷಯವಾಗಿರಬಾರದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಬಿಜೆಪಿ ನಾಯಕ ನಾಗೇಂದ್ರನ್ ಮಾತನಾಡುತ್ತಾ, ವಿಜಯ್ ಅವರಿಗೆ ರಾಜಕೀಯ ಅನುಭವ ಕಡಿಮೆ. ಅವರು ತ್ರಿಷಾ ಅವರ ಗುಂಗಿನಿಂದ ಹೊರಬರಬೇಕು, ಆಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಹೇಳಿ ಕೆಂಗಣ್ಣಿಗೆ ಗುರಿಯಾಗಿದ್ದರು.