ಬೆಂಗಳೂರು: ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ಕೆಲವು ಬೇಡಿಕೆಗಳಿಗೆ ಅಸ್ತು ಎಂದಿರುವ ಸರ್ಕಾರ ಹೊಸ ವೇತನ ಪರಿಷ್ಕರಣೆ ಕುರಿತು ಮಾತುಕತೆಗೆ ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳನ್ನು ಆಹ್ವಾನಿಸಿದೆ.
ಆದರೆ ಸರಕಾರದ ಆಹ್ವಾನವನ್ನು ಸಾರಿಗೆ ನೌಕರರ ಸಂಘಟನೆಗಳ ಒಕ್ಕೂಟ ತಿರಸ್ಕರಿಸಿದೆ.
ಬಾಕಿ ಇದ್ದ 38 ತಿಂಗಳ ಪೈಕಿ 26 ತಿಂಗಳ ಹಿಂಬಾಕಿ ವೇತನವನ್ನು ಬಿಡುಗಡೆ ಮಾಡಲು ಆದೇಶ ಹೊರಡಿಸಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಣೆ ಹೊರಡಿಸಿದ್ದು, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅವರ ಏಕ ಸದಸ್ಯ ಸಮಿತಿಯ ಶಿಫಾರಸಿನ ಅನ್ವಯ 1,271.47 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮುಂದಿನ ವೇತನ ಪರಿಷ್ಕರಣೆ:
01.04.2025 ರಿಂದ ಜಾರಿಗೆ ಬರುವಂತೆ ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳ ಮೂಲವೇತನವನ್ನು ಶೇಕಡಾವಾರು ಎಷ್ಟು ಪ್ರಮಾಣದಲ್ಲಿ ಪರಿಷ್ಕರಿಸಬೇಕು ಎಂಬ ಬಗ್ಗೆ ಕಾರ್ಮಿಕ ಸಂಘಟನೆಗಳ ಜೊತೆ ಚರ್ಚೆ ಮತ್ತು ಸಂಧಾನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರ ಆದೇಶಿಸಿದೆ. ಕಾರ್ಮಿಕ ಸಂಘಟನೆಗಳು ಹಾಗೂ ನೌಕರರು ಈ ಆದೇಶವನ್ನು ಒಪ್ಪಿಕೊಂಡು ಸಹಕರಿಸುವಂತೆ ಸಾರಿಗೆ ಸಚಿವರು ಮನವಿ ಮಾಡಿದ್ದಾರೆ.
ಮುಂದುವರೆದ ಮುಷ್ಕರ:
ಸರ್ಕಾರದ ಮನವಿಯನ್ನು ತಿರಸ್ಕರಿಸಿರುವ ಸಾರಿಗೆ ನೌಕರರು ಬೆಂಗಳೂರು ಚಲೋ ಆರಂಭಿಸಿದ್ದಾರೆ. ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಲಿದ್ದು ಈಗಾಗಲೇ ಕಾರ್ಮಿಕರು ಸೇರುತ್ತಿದ್ದಾರೆ. ಇಂದು ಬೆಳಗ್ಗೆ 10 ರಿಂದ ಸಂಜೆ 4ರವರೆಗೆ 'ಬೆಂಗಳೂರು ಚಲೋ' ನಡೆಯಲಿದೆ. ಒಂದು ವೇಳೆ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಂಜೆ 4ರ ನಂತರ ಸಾರಿಗೆ ಸಂಚಾರವನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮುಷ್ಕರದ ಹಿನ್ನೆಲೆಯಲ್ಲಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಬೆಳಗಿನ ಪಾಳಿಯ ಬಸ್ ಗಳು ರಸ್ತೆಗಿಳಿದಿವೆ. ಆದರೆ ಮಧ್ಯಾಹ್ನದ ನಂತರ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗುವ ಸಾಧ್ಯತೆಗಳಿವೆ.