ದಾವಣಗೆರೆ: ಸ್ನೇಹಿತರೊಂದಿಗೆ ಭದ್ರಾ ಬಲದಂಡೆ ನಾಲೆಗೆ ಈಜಲು ಹೋಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ. ತಾಲೂಕಿನ ಮರಬನಹಳ್ಳಿ ಬಳಿ ನಡೆದಿದೆ. ದಾವಣಗೆರೆಯ ಬಿಐಇಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ವಿವೇಕ್ ಮತ್ತು ಮಾನಸಿ ನೀರುಪಾಲಾಗಿರುವ ವಿದ್ಯಾರ್ಥಿಗಳು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದು, ವಿವೇಕ್ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ. ಮಾನಸಿಗಾಗಿ ಶೋಧ ಕಾರ್ಯ ಮುಂದುವರಿದೆ. ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 10 ಜನ ಸ್ನೇಹಿತರು ಬಸವಪಟ್ಟಣದ ಹತ್ತಿರದ ದೇವಾಲಯಕ್ಕೆ ಬಂದಿದ್ದರು. ಇದೇ ವೇಳೆ ಅಲ್ಲೇ ಸಮೀಪವಿರುವ ಭದ್ರಾ ಬಲದಂಡೆ ಕಾಲುವೆಗೆ ವಿದ್ಯಾರ್ಥಿಗಳು ಈಜಲು ತೆರಳಿದ್ದಾರೆ.
10 ಜನರ ಪೈಕಿ ವಿದ್ಯಾರ್ಥಿನಿ ಮಾನಸಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಈ ವೇಳೆ ಮಾನಸಿಯನ್ನು ರಕ್ಷೆಣೆ ಮಾಡಲು ವಿವೇಕ್ ನೀರಿಗೆ ಜಿಗಿದಿದ್ದು, ಇದನ್ನು ಕಂಡ ಉಳಿದ ವಿದ್ಯಾರ್ಥಿಗಳು ಕೈ-ಕೈ ಹಿಡಿದು ಚೈನ್ ಸಿಸ್ಟಮ್ ಮಾಡಿ ಅವರ ರಕ್ಷಣೆಗೆ ಮುಂದಾಗಿದ್ದರು. ಆದರೆ, ಮಾನಸಿ ಹಾಗೂ ವಿವೇಕ್ ನೀರಿನ ರಭಸಕ್ಕೆ ತೇಲಿಕೊಂಡು ಹೋಗಿದ್ದಾರೆ.ವಿವೇಕ್ ದಾವಣಗೆರೆಯ ನಿಟುವಳ್ಳಿ ಮೂಲದವನಾಗಿದ್ದಾನೆ. ವಿವೇಕ ಮೃತ ದೇಹ ಪತ್ತೆಯಾಗಿದ್ದು, ಮಾನಸಿ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.