ಚಿತ್ರದುರ್ಗ: ಬಿಎಸ್ವೈ ಅಭಿಮಾನೋತ್ಸವದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ ಪುರ ಪ್ರವೇಶ ಮಾಡಿದರು. ಅವರಿಗೆ ಮೈಸೂರು ದಸರಾ ಮಾದರಿಯ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು. ಸಾವಿರಾರು ಬಿಜೆಪಿ ಕಾರ್ಯಕರ್ತರು ಮತ್ತು 25ಕ್ಕೂ ಹೆಚ್ಚು ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು.
ಚಿತ್ರದುರ್ಗದ ಬಸವೇಶ್ವರ ವೃತ್ತದಿಂದ ಮದಕರಿ ವೃತ್ತದವರೆಗೆ 2.5 ಕಿಲೋಮೀಟರ್ ಮೆರವಣಿಗೆಯಲ್ಲಿ ಯಡಿಯೂರಪ್ಪ ಆಗಮಿಸಿದರು. ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಚಿತ್ರದುರ್ಗಕ್ಕೆ ಬಿಎಸ್ ವೈಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಮಾರ್ಗದಲ್ಲಿ ಬರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಗಾಂಧಿ ಪ್ರತಿಮೆ, ಅಂಬೇಡ್ಕರ್ ಪ್ರತಿಮೆ ಹಾಗೂ ಮದಕರಿ ನಾಯಕರ ಪ್ರತಿಮೆಗೆ ಯಡಿಯೂರಪ್ಪ ಅವರು ಮಾಲಾರ್ಪಣೆ ಮಾಡಿದರು.
1008 ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಗಮನ ಸೆಳೆಯಿತು. 500 ಕ್ಕೂ ಹೆಚ್ಚು ರೈತರು ನೇಗಿಲು ಹೊತ್ತು ಮತ್ತು 250 ಮಹಿಳೆಯರು ಒನಕೆ ಓಬವ್ವ ವೇಷಭೂಷಣದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಮತ್ತು ಪ್ರಮುಖರು ಮೆರವಣಿಗೆಯಲ್ಲಿ ಸಾಗಿದರು.
ಅಭಿಮಾನೋತ್ಸವಕ್ಕೆ ಭವ್ಯ ತಯಾರಿ:
ನಾಳೆ 1 ಗಂಟೆಯಿಂದ ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.
ಕಾರ್ಯಕ್ರಮಕ್ಕಾಗಿ ಸುಮಾರು 20 ಲಕ್ಷ ಚದರಡಿಯಷ್ಟು ಸಭಾಂಗಣ ಮತ್ತು 2 ಲಕ್ಷಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. 3 ವೇದಿಕೆಗಳಿದ್ದು, ಪ್ರಧಾನ ವೇದಿಕೆಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು, ಪ್ರಮುಖ ಸ್ವಾಮೀಜಿಗಳು ಆಸೀನರಾಗಲಿದ್ದಾರೆ.
ಮೂರು ಸಮಾನಾಂತರ ವೇದಿಕೆಗಳನ್ನು ನಿರ್ಮಿಸಲಾಗಿದೆ. ಹಿರಿಯ ಕಾರ್ಯಕರ್ತರು, ಅತಿ ಗಣ್ಯರು, ಗಣ್ಯರಿಗೆ ವಿಶೇಷ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. 10 ಲಕ್ಷ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀರಿನ ಪೊಟ್ಟಣ, ಮಜ್ಜಿಗೆ ನೀಡಲಾಗುತ್ತದೆ.
ವಿವಿಧ ರೀತಿಯ ರೈಸ್ ಬಾತ್, ಮೊಸರನ್ನ, ಮೈಸೂರು ಪಾಕ್ ಸ್ವೀಟ್ ಕೊಡಲಾಗುತ್ತದೆ. ಸುಮಾರು 700 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ವ್ಯವಸ್ಥೆಗಾಗಿ 100 ವೈದ್ಯರ ತಂಡ, 25 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ಯಡಿಯೂರಪ್ಪನವರ ಜೀವನ ಮತ್ತು ಹೋರಾಟಕ್ಕೆ ಸಂಬಂಧಿಸಿದಎರಡು ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತದೆ.