ಬೆಂಗಳೂರು: 1996ರ ಜೂನ್ 1ರಂದು ಕರ್ನಾಟಕದ ನೆಲದಿಂದ ಹೊರಟ ಒಬ್ಬ ರೈತನ ಮಗ ದೆಹಲಿ ತಲುಪಿ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಐತಿಹಾಸಿಕ ಕ್ಷಣಕ್ಕೆ ಇಂದು 30 ವರ್ಷಗಳು ತುಂಬಿವೆ ಎಂದು ಅವರ ಮೊಮ್ಮಗ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೆನಪಿಸಿಕೊಂಡಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರನೂ ಆದ ನಿಖಿಲ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ, @H_D_Devegowda ರವರು ಪ್ರಧಾನಮಂತ್ರಿಯಾಗಿ ದೇಶಕ್ಕೆ ನೀಡಿದ ನಾಯಕತ್ವ, ಗ್ರಾಮೀಣ ಭಾರತಕ್ಕೆ ಕೊಟ್ಟ ಆದ್ಯತೆ, ರೈತರ ಪರವಾದ ನಿಲುವು, ನೀರಾವರಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನೀಡಿದ ಒತ್ತು ಇಂದಿಗೂ ಸ್ಮರಣೀಯ. ಅಧಿಕಾರಕ್ಕಿಂತ ಜನರ ಹಿತವೇ ಮುಖ್ಯ ಎಂಬುದನ್ನು ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ತೋರಿಸಿಕೊಟ್ಟಿದ್ದಾರೆ.
ಕರ್ನಾಟಕದ ಹೆಸರನ್ನು ರಾಷ್ಟ್ರದ ಉನ್ನತ ಸ್ಥಾನಕ್ಕೆ ಕೊಂಡೊಯ್ದು, ಕನ್ನಡಿಗರ ಆತ್ಮಗೌರವವನ್ನು ಹೆಚ್ಚಿಸಿದ ಅವರ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿ. ಇಷ್ಟು ದಶಕಗಳ ಸಾರ್ವಜನಿಕ ಜೀವನದ ಬಳಿಕವೂ ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ರಾಜ್ಯದ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ.
ಅವರ ಅನುಭವ, ದೂರದೃಷ್ಟಿ ಮತ್ತು ಜನಪರ ಚಿಂತನೆಯಿಂದ ಪ್ರತಿದಿನವೂ ಹೊಸದನ್ನು ಕಲಿಯುವ ಅವಕಾಶ ನನಗೆ ಸಿಗುತ್ತಿರುವುದು ನನ್ನ ಭಾಗ್ಯ. ದೇಶದ ಗೌರವ, ಕರ್ನಾಟಕದ ಹೆಮ್ಮೆ ಎಂದು ನಿಖಿಲ್ ಸ್ಮರಿಸಿಕೊಂಡಿದ್ದಾರೆ.