ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ತಂದಿವೆ. ಅಬಕಾರಿ ಇಲಾಖೆಗೆ ಸಂಬಂಧಿಸಿದ ಆಡಿಯೋ ದಾಖಲೆಗಳು ಬಹಿರಂಗವಾಗುತ್ತಿದ್ದಂತೆ ವಿಧಾನಸೌಧದ ಒಳಗೂ ಹೊರಗೂ ಗದ್ದಲ ಶುರುವಾಗಿದೆ. ಆಡಿಯೋದಲ್ಲಿ ಸಚಿವರ ಪುತ್ರನ ಹೆಸರು ಕೇಳಿಬಂದಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಸಚಿವರ ರಾಜೀನಾಮೆಗೆ ಬಿಜೆಪಿ–ಜೆಡಿಎಸ್ ತೀವ್ರ ಒತ್ತಾಯ ಮಾಡುತ್ತಿವೆ.
ವಿಧಾನಸಭೆ ಮತ್ತು ವಿಧಾನಪರಿಷತ್ ಎರಡೂ ಸದನಗಳಲ್ಲಿ ವಿರೋಧ ಪಕ್ಷಗಳು ರಾಜೀನಾಮೆಗೆ ಬಿಗಿಪಟ್ಟು ಹಿಡಿದು ಹೋರಾಟಕ್ಕೆ ಮುಂದಾಗಿವೆ. ಈ ಹಿಂದೆ ಕೆ.ಎಸ್. ಈಶ್ವರಪ್ಪ ಪ್ರಕರಣದಲ್ಲಿ ಕಾಂಗ್ರೆಸ್ ತೆಗೆದುಕೊಂಡ ನಿಲುವನ್ನು ನೆನಪಿಸುತ್ತಾ, ಅದೇ ನೈತಿಕ ಮಾಪಕವನ್ನು ಅನ್ವಯಿಸಿ ಸಚಿವ ತಿಮ್ಮಾಪುರ ಕೂಡ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ. ಈ ನಡುವೆ ಸರ್ಕಾರ ಸಂಕಷ್ಟದಿಂದ ಪಾರಾಗಲು ಒಳಚರ್ಚೆ ನಡೆಸುತ್ತಿದೆ.. ಸಚಿವರ ರಾಜೀನಾಮೆ ವಿಚಾರವಾಗಿ ಮುಂದಿನ ನಿರ್ಧಾರವೇ ಈಗ ಎಲ್ಲರ ಕುತೂಹಲವಾಗಿದೆ.