ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿಯೇ ಕಳ್ಳತನ ನಡೆದಿರುವ ಪ್ರಕರಣ ವರದಿಯಾಗಿದೆ. ನಗರಾಭಿವೃದ್ಧಿ ಸಚಿವ ಸುರೇಶ್ ಅವರ ಕಚೇರಿಯಲ್ಲಿ300 ಗ್ರಾಂ ಚಿನ್ನಾಭರಣ , 1.5 ಲಕ್ಷ ರೂ. ಕ್ಯಾಶ್ ಇದ್ದ ಕೈ ಚೀಲ ಕಳ್ಳತನವಾಗಿದೆ.
ಕೆಲಸದ ನಿಮಿತ್ತ ಸಚಿವರ ಕಚೇರಿಗೆ ನವೀನ್ ಎಂಬವರು ಚಿನ್ನಾಭರಣ ಹಾಗೂ ನಗದು ಇದ್ದ ಕೈ ಚೀಲದೊಂದಿಗೆ ಬಂದಿದ್ದರು. ತಮ್ಮ ಕೆಲಸ ಮುಗಿಸಿಕೊಂಡು ತೆರಳುವಾಗ ಕೈ ಚೀಲವನ್ನು ಮರೆತು ಹೋಗಿದ್ದರು. ಮಾರನೇ ದಿನ ಬಂದು ನೋಡಿದಾಗ ಕೈ ಚೀಲ ಅಲ್ಲಿ ಇರಲಿಲ್ಲ. ನಂತರ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಡಿ ಗ್ರೂಪ್ ನೌಕರನೊಬ್ಬ ಕೈಚೀಲವನ್ನು ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಳ್ಳತನ ಪ್ರಕರಣವೇನೋ ಪತ್ತೆಯಾಗಿದೆ. ಆದರೆ ಹಲವು ಪ್ರಶ್ನೆಗಳು ಉದ್ಭವವಾಗಿವೆ. ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸದೇ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್ ಅನ್ನು ವಿಧಾನಸೌಧದ ಒಳಗೆ ಬಿಟ್ಟಿದ್ದು ಹೇಗೆ ಎಂಬ ಕೇಳಿ ಬರುತ್ತಿದೆ.