ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದು ತೀರ್ಮಾನವಾಗಿಲ್ಲ. ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸುವುದು ಸರಿಯಲ್ಲ. ಇಷ್ಟಕ್ಕೂ ಮೊದಲು ಒಟ್ಟಾಗಿ ಚುನಾವಣೆ ಗೆಲ್ಲುವುದು ಮುಖ್ಯ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ ಹೇಳಿದ್ದಾರೆ.
ಕೇಮದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂಬ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ಜೆಡಿಎಸ್ ನಾಯಕರ ಹೇಳಿಕೆಗೆ ಅಶೋಕ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಎನ್ಡಿಎ ಒಕ್ಕೂಟದಲ್ಲಿ ಮುಖ್ಯಮಂತ್ರಿ ಯಾರು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷರು ತೀರ್ಮಾನಿಸುತ್ತಾರೆ. ರಾಜ್ಯದ ಮೈತ್ರಿಗಿಂತ ಎನ್ಡಿಎ ಒಕ್ಕೂಟದ ನಿರ್ಧಾರವೇ ಮುಖ್ಯವಾಗಿರುತ್ತದೆ. ಆಯಾ ಪಕ್ಷದ ಮುಖಂಡರು ಅವರ ಪಕ್ಷದ ಪರವಾಗಿ ಮಾತನಾಡುವುದು ಸಹಜ ಎಂದರು.
ಶಿಸ್ತುಬದ್ಧ ಪಕ್ಷ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಯ್ಕೆ ಹೇಗೆ ನಡೆಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅನೇಕ ಬಾರಿ ಅಚ್ಚರಿಯ ಆಯ್ಕೆ ಆಗುವುದನ್ನು ನೋಡಿದ್ದೇವೆ. ಸಧ್ಯಕ್ಕೆ ಸಿಎಂ ಯಾರು ಎನ್ನುವುದು ತೀರ್ಮಾನವಾಗಿಲ್ಲ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಇನ್ನೂ ಅಂತಿಮವಾಗಿಲ್ಲ. ಮಾತುಕತೆ ಹಂತದಲ್ಲಿದೆ ಎಂದು ತಿಳಿಸಿದರು.
ಜಿಬಿಎ ಚುನಾವಣೆ ಮೈತ್ರಿ ಸಂಬಂಧ ನಮ್ಮ ಉಸ್ತುವಾರಿ ಜೊತೆ ಚರ್ಚೆ ನಡೆಸಿದ್ದೇವೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಸೇರಿ ನಾವೆಲ್ಲರೂ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಅಂತಿಮವಾಗಿ ಹೈಕಮಾಂಡ್ ಮಾಡುವ ನಿರ್ಧಾರಕ್ಕೆ ಬದ್ಧ ಎಂದು ಮಾತು ಕೊಟ್ಟಿದ್ದೇವೆ ಎಂದರು.