ತುಮಕೂರು: ರೈತ, ಕೃಷಿಕ ಎಂದು ಹೇಳಿಕೊಳ್ಳಲು ಹಿಂಜರಿಯುವ ಈ ಯುಗದಲ್ಲಿ ಯುವಕನೊಬ್ಬ ಲಗ್ನ ಪತ್ರಿಕೆಯಲ್ಲಿ ಹೆಸರಿನ ಮುಂದೆ ರೈತ ಎಂದು ಮುದ್ರಿಸಿರುವುದು ಗಮನ ಸೆಳೆಯುತ್ತಿದೆ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು! ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕುರುಬರಹಳ್ಳಿಯ ಮೆಕಾನಿಕಲ್ ಎಂಜಿನಿಯರ್ ಪದವೀಧರ ಕೆ.ಎನ್. ತೇಜೇಶ್ ಕುಮಾರ್ ತಮ್ಮ ಲಗ್ನ ಪತ್ರಿಕೆಯಲ್ಲಿ ರೈತ ಎಂದು ಹೇಳಿಕೊಂಡಿದ್ದಾರೆ. ಕೃಷಿಯಿಂದ ಹಿಂದೆ ಸರಿದು ನಗರ ಪ್ರದೇಶಗಳಲ್ಲಿ ಯಾವ ಯಾವುದೋ ಕೆಲಸ ಮಾಡುತ್ತಾ ನಗರ ಪ್ರದೇಶದಲ್ಲಿದ್ದೆನೆ ಎಂದು ಹೇಳಿಕೊಳ್ಳುವುದೇ ಪ್ರತಿಷ್ಠೆಯಾಗಿರುವ ಈ ಕಾಲದಲ್ಲಿ ನಾನು ರೈತ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇವರ ವಿವಾಹ ನಾಳೆ, ಫೆಬ್ರವರಿ 4ರ ಬುಧವಾರ ನಡೆಯುತ್ತಿದೆ. ಇವರು ವಿವಾಹವಾಗುತ್ತಿರುವ ಹರ್ಷಿತ ಬಿ.ಕಾಂ ಪದವೀಧರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತೇಜೇಶ್ಕುಮಾರ್ ನಿಜವಾಗಿಯೂ, ರೈತರೇ ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನನ್ನದು ರೈತ ಕುಟುಂಬದ ಹಿನ್ನೆಲೆ. ಹಲವು ದಶಕಗಳಿಂದ ಕೃಷಿಯೇ ನಮ್ಮ ಉದ್ಯೋಗ ಎಂದಿದ್ದಾರೆ.
ರೈತರಿಗೆ ಹೆಣ್ಣು ಕೊಡುತ್ತಿಲ್ಲ ಎಂಬ ಭಾವನೆ ಇದೆ. ಕೃಷಿ ಲಾಭದಾಯಕ ಅಲ್ಲ ಎಂಬ ಮನಸ್ಥಿತಿಯಿಂದ ಹೊರ ಬರಬೇಕು. ರೈತರೂ ಇಂದು ಕೈ ತುಂಬಾ ಹಣ ಸಂಪಾದಿಸುತ್ತಿದ್ದಾರೆ. ಕೃಷಿಯಲ್ಲಿರುವ ನೆಮ್ಮದಿ ಬೇರೆ ಯಾವುದೇ ಉದ್ಯೋಗದಲ್ಲೂ ಇಲ್ಲ ಎಂದು ಅಭಿಪ್ರಾಯಪಡುತ್ತಾರೆ.
ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ನಾನು ಮತ್ತು ಸ್ನೇಹಿತರೊಂದಿಗೆ ಕೃಷಿ ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದೇವೆ. ಕೈ ತುಂಬಾ ಆದಾಯವಿದೆ. ರೈತರು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸುವ ಉದ್ದೇಶದಿಂದ ಲಗ್ನ ಪತ್ರಿಕೆಯಲ್ಲಿ ರೈತ ಎಂದು ಹಾಕಿಸಿಕೊಂಡಿದ್ದೇನೆ ಎಂದು ಹೇಳುತ್ತಾರೆ.