ಬೆಂಗಳೂರು: ಕೆಎಎಸ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಮಠಾಧೀಶರಾಗಿರುವ ಸ್ವಾಮೀಜಿಯೊಬ್ಬರಿಗೆ ಸರ್ಕಾರ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. ಈ ಎಡವಟ್ಟಿನಿಂದ ಸರ್ಕಾರ ಮುಜುಗರಕ್ಕೀಡಾಗಿದೆ. ಸರ್ಕಾರ ಇತ್ತೀಚೆಗೆ 20 ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಹೆಚ್.ಎಲ್. ನಾಗರಾಜ ಅವರ ಹೆಸರೂ ಸೇರಿದೆ.
ಕೆಎಎಸ್ ಅಧಿಕಾರಿಯಾಗಿದ್ದ ಹೆಚ್.ಎಲ್. ನಾಗರಾಜ ಅವರು ಮಂಡ್ಯ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ನಂತರ ಅವರು ಬೆಂಗಳೂರಿನ ಮೈಸೂರು ರಸ್ತೆ ಕುಂಬಳಗೋಡಿನಲ್ಲಿರುವ ವಿಶ್ವ ಒಕ್ಕಲಿಗ ಮಹಾಸಂಸ್ಥಾನದಲ್ಲಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಎಂಬ ಹೆಸರಿನಲ್ಲಿ ಮಠಾಧೀಶರಾಗಿದ್ದಾರೆ. ಸರ್ಕಾರದ ಆದೇಶದಲ್ಲಿ ಅವರನ್ನು 'ಸ್ಥಳ ನಿರೀಕ್ಷಣೆಯಲ್ಲಿರುವ ಅಧಿಕಾರಿ' ಎಂದು ನಮೂದಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಆದೇಶಕ್ಕೆ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ್ ಪ್ರಸಾದ್ ಸಹಿ ಹಾಕಿದ್ದಾರೆ. ಸಹಿ ಹಾಕುವುದಕ್ಕೂ ಮುನ್ನ ಒಮ್ಮೆ ಕಣ್ಣಾಡಿಸಿದ್ದರೆ ಈ ಎಡವಟ್ಟು ಸಂಭವಿಸುತ್ತಿರಲಿಲ್ಲ. ಏನೇ ಆದರೂ ಇದರಿಂದ ಸರ್ಕಾರ ಮುಜುಗರಕ್ಕೀಡಾಗಿರುವುದರಲ್ಲಿ ಸಂಶಯವೇ ಇಲ್ಲ.