ನವದೆಹಲಿ: ಮಹಿಳೆಯ ಸ್ತನಗಳನ್ನು ಮುಟ್ಟುವುದು ಮತ್ತು ಪೈಜಾಮಾದ ಲಾಡಿ ಬಿಚ್ಚುವುದು "ಅತ್ಯಾಚಾರ ಯತ್ನವಲ್ಲ" ಎಂಬ ಅಲಹಾಬಾದ್ ಹೈಕೋರ್ಟ್ ನ ವಿವಾದಾತ್ಮಕ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿದೆ.
ಈ ಹಿಂದೆ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಸ್ತನಗಳನ್ನು ಹಿಡಿದು ಪೈಜಾಮಾದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ. ಅದು ಅತ್ಯಾಚಾರಕ್ಕೆ ಸಿದ್ಧತೆ ಅಷ್ಟೇ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು.
ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ಎನ್ ವಿ ಅಂಜಾರಿಯಾ ಅವರ ಪೀಠ "ಕ್ರಿಮಿನಲ್ ನ್ಯಾಯಶಾಸ್ತ್ರದ ಸ್ಥಿರ ತತ್ವಗಳ ತಪ್ಪಾದ ಅನ್ವಯ"ದ ಕಾರಣದಿಂದಾಗಿ ಈ ಆಕ್ಷೇಪಾರ್ಹ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
ಲೈಂಗಿಕ ಅಪರಾಧ ಪ್ರಕರಣಗಳ ನ್ಯಾಯದಾನವು ಕೇವಲ ಕಾನೂನಿನ ಚೌಕಟ್ಟಿಗೆ ಸೀಮಿತವಾಗಿರದೆ, ಅದು ಸಂವೇದನಾಶೀಲತೆ ಮತ್ತು ಸಹಾನುಭೂತಿಯಿಂದ ಕೂಡಿರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದೀಗ ಸುಪ್ರೀಂ ಕೋರ್ಟ್, ಇದು ಅಮಾನವೀಯ ಮತ್ತು ಸಂವೇದನಾ ರಹಿತ ತೀರ್ಪು. ಸ್ತನಗಳನ್ನು ಹಿಡಿಯುವುದು ಮತ್ತು ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರದ ಪ್ರಯತ್ನವೇ ಹೊರತು ಸಿದ್ಧತೆಯಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.