ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಯಾವುದೇ ನೋವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಂಪುಟ ಸಹದ್ಯೋಗಿಗಳಿಗೆ ಧನ್ಯವಾದ ಹೇಳಲು ಸಿದ್ದರಾಮಯ್ಯ ತಮ್ಮ ನಿವಾಸ ಕಾವೇರಿಯಲ್ಲಿ ಬ್ರೇಕ್ ಫಾಸ್ಟ್ ಹಮ್ಮಿಕೊಂಡಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು ಭಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನಕ್ಕೆ ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಯಾವುದೇ ನೋವಿಲ್ಲ. ಹೈಕಮಾಂಡ್ ಹೇಳುವುವುದನ್ನು ಪಾಲನೆ ಮಾಡುವುದು ನನ್ನ ಕರ್ತವ್ಯ ಎಂದು ಸಭೆಗೆ ತಿಳಿಸಿದ್ದಾರೆ.
ಆದರೆ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಗುಟ್ಟನ್ನು ಸಿದ್ದರಾಮಯ್ಯ ಬಿಟ್ಟುಕೊಟ್ಟಿಲ್ಲ. ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ಪ್ರಕಟಿಸಲಿದೆ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವುದು ನನ್ನ ಕರ್ತವ್ಯ ಎಂದರು.
ಡಿಕೆ ಶಿವಕುಮಾರ್ ಮಾತನಾಡಿ, ನಮ್ಮಲ್ಲಿ ಯಾವುದೇ ಅಸಮಾಧಾನ, ಬೇಸರ ಇಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ನಾವಿಬ್ಬರೂ ಕೂಡ ಪಕ್ಷಕ್ಕಾಗಿ ದುಡಿದ್ದೇವೆ, ದುಡಿಯುತ್ತೇವೆ. ಕಾಂಗ್ರೆಸ್ ಒಂದು ಕುಟುಂಬ, ಇಲ್ಲಿ ಯಾವುದೇ ಬಣಗಳಿಲ್ಲ ಎಂದು ತಿಳಿಸಿದ್ದಾರೆ.
ಉಪಹಾರ ಕೂಟಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಆತ್ಮೀಯವಾಗಿ ಬರ ಮಾಡಿಕೊಂಡರು. ಈ ವೇಳೆ, ಶಿವಕುಮಾರ್ ಸಿದ್ದರಾಮಯ್ಯ ಪಾದ ಮುಟ್ಟಿ ನಮಸ್ಕರಿಸಿದರು.ಆರ್ ಬಿ ತಿಮ್ಮಾಪುರ. ಎಂ.ಸಿ.ಸುಧಾಕರ್, ಜಮೀರ್ ಅಹಮದ್, ಬೈರತಿ ಸುರೇಶ್, ಸಂತೋಷ್ ಲಾಡ್. ಎಂ.ಬಿ.ಪಾಟೀಲ್ , ರಾಮಲಿಂಗಾರೆಡ್ಡಿ, ಎಸ್.ಎಸ್ ಮಲ್ಲಿಕಾರ್ಜುನ.ಶರಣಬಸಪ್ಪ, ಪರಮೇಶ್ವರ್, ಚಲುವರಾಯಸ್ವಾಮಿ, ಸತೀಶ್,ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸಿದ್ದಾರೆ.