ಬೆಂಗಳೂರು: ಅನುದಾನ ನೀಡದೆ ರಾಜ್ಯದ ವಿಶ್ವ ವಿದ್ಯಾಲಯಗಳನ್ನು ಪರೋಕ್ಷವಾಗಿ ಕೊಲ್ಲಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪಕ್ಷವು ಸಿಎಂ ಸಿದ್ದರಾಮಯ್ಯ ಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದೆ.
ಕನ್ನಡ ದ್ರೋಹಿ ಸಿದ್ದರಾಮಯ್ಯ ಅವರೇ, ಕನ್ನಡಿಗರ ಹೆಮ್ಮೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ನಿತ್ಯ ಚಟುವಟಿಕೆಗಳಿಗೆ ಹಾಗೂ ಉಪನ್ಯಾಸಕರು ಹಾಗೂ ಹೊರ ಗುತ್ತಿಗೆ ನೌಕರರು ವೇತನಕ್ಕೂ ಪರದಾಡುವಂತಾಗಿದೆ.
ಕನ್ನಡ ದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ಕನ್ನಡದ ಕೆಲಸಗಳಿಗೆ, ಕನ್ನಡದ ಜ್ಞಾನ ವಿಕಾಸಕ್ಕೆ ಸಿದ್ದರಾಮಯ್ಯ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎನ್ನುವುದು ಅತ್ಯಂತ ನಾಚಿಕೆಗೇಡಿನ ವಿಚಾರ. 2020ರಲ್ಲಿ ವಿಪಕ್ಷ ನಾಯಕರಾಗಿದ್ದ "ಹಂಪಿ ಕನ್ನಡ ವಿವಿಯ ಅನುದಾನ ವಿಚಾರವಾಗಿ ಅಂದಿನ ಸರ್ಕಾರವನ್ನು ಟೀಕಿಸಿದ್ದು ಆ ನಿಮ್ಮ ಮಾತುಗಳು ನೆನಪಿದೆಯೇ ? ಎಂದು ಪ್ರಶ್ನಿಸಿದೆ.
ರಾಶಿ ರಾಶಿಯಾಗಿ ಶಾಸಕರು, ಪಕ್ಷದ ಹಿಂಬಾಲಕರನ್ನು ನಿಗಮ, ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಿ ಅವರುಗಳಿಗೆ ಸಚಿವ ಸಂಪುಟ ದರ್ಜೆ ಸ್ಥಾನ ಮಾನ ನೀಡಿ ನೂರಾರು ಕೋಟಿ ಹಣವನ್ನು ದುಂದು ಮಾಡಲಾಗುತ್ತಿದೆ. ನಿಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಕನ್ನಡ ದ್ರೋಹಿ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಹಂಪಿ ವಿವಿಯಲ್ಲಿ ವರ್ಷಗಳಿಂದ ಅನುದಾನದ ಕೊರತೆಯಿಂದ ಉಪನ್ಯಾಸಕರು, ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರಿಗೆ ಸಂಬಳವಾಗಿಲ್ಲ. ಹಣಕಾಸಿನ ಸಮಸ್ಯೆಯಿಂದ ವಿವಿಯಲ್ಲಿ ನಿತ್ಯ ಚಟುವಟಿಕೆಗಳು ಸೇರಿದಂತೆ ಸಂಶೋಧನಾ ಕೆಲಸಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಫೆ.25ರಂದು 34ನೇ ನುಡಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಕನ್ನಡದ ಬಗ್ಗೆ ಕಾಳಜಿ ಇದ್ದರೇ ರಾಜ್ಯ ಸರ್ಕಾರ ಎಚ್ಚೆತ್ತು ಅಗತ್ಯವಿರುವಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಜೆಡಿಎಸ್ ಒತ್ತಾಯಿಸಿದೆ.