ಲಖನೌ: ಇರಾನ್-ಇಸ್ರೇಲ್ ಹಾಗೂ ಅಮೆರಿಕಾ ಸಂಘರ್ಷ ಮುಂದುವರೆದಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಉದ್ವಿಗ್ನತೆಯಿಂದಾಗಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಎಲ್ ಪಿಜಿ ಸಿಲಿಂಡರ್ ಕೊರತೆ ಎದುರಾಗಿದೆ. ದೇಶಾದ್ಯಂತ ಸಿಲಿಂಡರ್ ಸಮಸ್ಯೆ ತಲೆದೋರಿದ್ದು, ಜನಸಾಅಮಾನ್ಯರು, ಹೋಟೆಲ್ ಮಾಲೀಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇಂತಹ ಸಂದರ್ಭವನ್ನೇ ಬಂಡವಾಳಮಾಡಿಕೊಂಡಿರುವ ಕಳ್ಳರು, ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯನ್ನೇ ಕದ್ದು ಪರಾರಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 500ಕ್ಕೂ ಹೆಚ್ಚು ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್ ನ್ನೇ ಕಳ್ಳರ ಗ್ಯಾಂಗ್ ಕದ್ದೊಯ್ದಿದೆ. ರಾಯಗಂಜ್ ಮೂಲದ ನೀರಜ್ ಅಗರ್ವಾಲ್ ಅವರಿಗೆ ಸೇರಿದ ಟ್ರಕ್ ನಲ್ಲಿ ಭಾರತ್ ಪೆಟ್ರೋಲಿಯಂ ಗೆ ಸೇರಿದ 524 ಎಲ್ ಪಿಜಿ ಸಿಲಿಂಡರ್ ಸಾಗಿಸಲಾಗುತ್ತಿತ್ತು.
ಟ್ರಕ್ ಚಾಲಕ ರಾಜ್ ಕುಮಾರ್ ಎಂಬಾತ ಗಾಡಿಯನ್ನು ಕಾರಾರಿ ಡಿಪೋ ಬಳಿ ನಿಲ್ಲಿಸಿ, ಮಾರ್ಚ್ 2ರಂದು ಹೋಳಿಹಬ್ಬಕ್ಕಾಗಿ ಊರುಗೆ ಹೋಗಿದ್ದರು. ಮಾರ್ಚ್ 6ರಂದು ಮರಳಿ ಬಂದಾಗ ಅವರು ನಿಲ್ಲಿಸಿದ್ದ ಜಾಗದಲ್ಲಿ ಸಿಲಿಂಡರ್ ಗಳ ಟ್ರಕ್ ಇರಲಿಲ್ಲ. ಸಿಲಿಂಡರ್ ಗಳ ಸಮೇತ ಟ್ರಕ್ ಕಳ್ಳತನಾವಾಗಿತ್ತು.
ಗಾಬರಿಯಾದ ಚಾಲಕ ಮಾಲೀಕನಿಗೆ ವಿಷಯ ತಿಳಿಸಿದ್ದಾನೆ. ನೀರಜ್ ಅಗರ್ವಾಲ್ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದರು. ಮಾರ್ಚ್ 7ರಂದು ಬರಗಾಂವ್ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಟ್ರಕ್ ಪತ್ತೆಯಾಗಿದೆ. ಆದರೆ ಅದರಲ್ಲಿದ್ದ ಸಿಲಿಂಡರ್ ಗಳು ಮಾತ್ರ ಕಳ್ಳತನಾವಾಗಿವೆ. ತಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವ ಪೊಲೀಸರು ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.