ಗದಗ: ಪ್ರತಿ ದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ತಂದೆಯ ಕಾಟಕ್ಕೆ ಬೇಸತ್ತ ಮಗ, ತಂದೆಯನ್ನೇ ಹೊಡೆದು ಕೊಂದು, ಪೊಲೀಸ್ ಠಾಣೆಗೆ ತೆರಳಿ ಶರಣಾದ ಘಟನೆ ಗದಗದಲ್ಲಿ ನಡೆದಿದೆ.
ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಗೋವನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಂಕರಗೌಡ ದ್ಯಾಮನಗೌಡ್ರ (60) ಕೊಲೆಯಾದ ತಂದೆ. ಪ್ರಭು ದ್ಯಾಮನಗೌಡ್ರ (23) ತಂದೆಯನ್ನೇ ಕೊಂದ ಮಗ.
ಕಂಠಪೂರ್ತಿ ಕುಡಿದು ಮನೆಗೆ ಬಂದ ಶಂಕರಗೌಡ ಗಲಾಟೆ ಆರಂಭಿಸಿದ್ದರಿಂದ ತಂದೆ - ಮಗನ ನಡುವೆ ತೀವ್ರ ಜಗಳವಾಗಿದೆ. ಈ ವೇಳೆ ಕೋಪಗೊಂಡ ಪ್ರಭು ಕೈಯಿಂದಲೇ ತಂದೆಯ ತಲೆ ಹಾಗೂ ಮರ್ಮಾಂಗಗಳಿಗೆ ಬಲವಾಗಿ ಹೊಡೆದಿದ್ದಾನೆ. ಶಂಕರಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಪ್ರಭು ಲಕ್ಷ್ಮೀಶ್ವರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕುಡಿದು ಪದೇಪದೇ ಕಾಟ ಕೊಡುತ್ತಿದ್ದ ಕಾರಣಕ್ಕೆ ಹೊಡೆದು ಕೊಲೆ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
ಇನ್ನು ತಂದೆ -ಮಗನ ನಡುವೆ ಎರಡು ಎಕರೆ ಜಮೀನಿನ ಹಂಚಿಕೆ ವಿಚಾರವಾಗಿ ವೈಮನಸ್ಸು ಇತ್ತು ಎನ್ನಲಾಗಿದ್ದು, ಆಸ್ತಿ ವಿವಾದವೂ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಲಕ್ಷ್ಮೀಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.