ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿ ಪೊಲೀಸರನ್ನೇ ದಾರಿ ತಪ್ಪಿಸಲು ಪ್ರಯತ್ನಿಸಿದ್ದ ಪತಿಯೊಬ್ಬ, ಕೊನೆಗೆ ಸ್ವತಃ ತಾನೇ ಬರೆದಿಟ್ಟ 'ಕೈಬರಹದ ಪತ್ರ'ದಿಂದಾಗಿ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.ಆಹಾರ ತಜ್ಞೆ ಶಿಲ್ಪಾ ಸಾಲ್ವಿ (39) ಅವರ ಬರ್ಬರ ಹತ್ಯೆ ನಡೆದಿದೆ. ನಾಲ್ಕು ದಿನಗಳ ಹಿಂದೆ ಶಿಲ್ಪಾ ನಾಪತ್ತೆಯಾಗಿದ್ದಾರೆ ಎಂದು ಪತಿ ವಿಶಾಲ್ ಸಾಲ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪೊಲೀಸರು ನಾಪತ್ತೆ ಪ್ರಕರಣ ಎಂದು ತನಿಖೆ ಆರಂಭಿಸಿದ್ದರು.ಮನೆಯಲ್ಲಿ ದಂಪತಿಯ ಮಗನಿಗೆ ವಿಶಾಲ್ ಬರೆದಿದ್ದ ಟಿಪ್ಪಣಿ ಸಿಕ್ಕಿದೆ. "ನಾನು ದೊಡ್ಡ ತಪ್ಪು ಮಾಡಿದ್ದೇನೆ, ಶಿಲ್ಪಾ ಇನ್ನು ಬದುಕಿಲ್ಲ" ಎಂದು ಅದರಲ್ಲಿ ಒಪ್ಪಿಕೊಂಡಿದ್ದ. ಮಗ ಈ ಪತ್ರವನ್ನು ಪೊಲೀಸರಿಗೆ ನೀಡುತ್ತಿದ್ದಂತೆ ಪ್ರಕರಣಕ್ಕೆ ತಿರುವು ಸಿಕ್ಕಿತು.
ಪೊಲೀಸರು ಶೋಧ ನಡೆಸಿದಾಗ, ಸೂರತ್ನ ಸಲಬತ್ಪುರದಲ್ಲಿರುವ ವಿಶಾಲ್ನ ಹಳೆಯ ಪಾಳುಬಿದ್ದ ಮನೆಯಲ್ಲಿ ಶಿಲ್ಪಾ ಅವರ ಕೊಳೆತ ಶವ ಪತ್ತೆಯಾಗಿದೆ. ಸಾಕ್ಷ್ಯ ನಾಶಪಡಿಸಲು ಆರೋಪಿ, ಶವದ ಮೇಲೆ ಸಿಮೆಂಟ್ ಸುರಿದು ಮರದ ಪೆಟ್ಟಿಗೆಯಲ್ಲಿ ಭದ್ರವಾಗಿ ಮುಚ್ಚಿಟ್ಟಿದ್ದನು.ದಂಪತಿಗಳ ನಡುವಿನ ವೈವಾಹಿಕ ಕಲಹ ಮತ್ತು ಪತ್ನಿಯ ವಿವಾಹೇತರ ಸಂಬಂಧದ ಶಂಕೆಯೇ ಈ ಕೊಲೆಗೆ ಕಾರಣವೆಂದು ಶಂಕಿಸಲಾಗಿದೆ.ಪ್ರಸ್ತುತ ಆರೋಪಿ ವಿಶಾಲ್ ತಲೆಮರೆಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆತನ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.