ರಾಯಚೂರು: ದಲಿತ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಸಿದ್ದರಾಮಯ್ಯ. ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರಜುನ ಖರ್ಗೆ ಮತ್ತು ಡಾ ಜಿ ಪರಮೇಶ್ವರ್ ಅವರನ್ನು ಖಾಲಿ ಮಾಡಿಸಿ ಹುತ್ತದೊಳಗೆ ಸೇರಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಅವರು ರಾಯಚೂರಿನಲ್ಲಿ ಇಂದು ಮಾತನಾಡಿದರು. ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಗೆ ಓಡಿಸಿ, ಪರಮೇಶ್ವರ್ ಅಧ್ಯಕ್ಷರಾಗಿದ್ದರೂ ಅವರನ್ನು ಸೋಲಿಸಿ ಸಿದ್ದರಾಮಯ್ಯ ಸಿಎಂ ಆದರು. ದಲಿತರು ಮುಖ್ಯಮಂತ್ರಿ ಆಗುವುದಿದ್ದರೆ ಯಾವುತ್ತೋ ಆಗಬೇಕಿತ್ತು. 75 ವರ್ಷ ಆದರೂ ಏಕೆ ಆಗಲಿಲ್ಲ ಎಂದು ಪ್ರಶ್ನಿಸಿದರು.
ಗೃಹ ಸಚಿವ ಪರಮೇಶ್ವರ ಅವರು ವೈಯಕ್ತಿಕ ಕೆಲಸಕ್ಕೆ ಭೇಟಿ ಮಾಡಿದ್ದಾರೆ. ಅದನ್ನು ಬಿಟ್ಟು ಯಾವುದೇ ರಾಜಕೀಯ ಚರ್ಚೆ ನಮ್ಮಿಬ್ಬರ ನಡುವೆ ನಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ನಾವು ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ದೇವೇಗೌಡರ ಬೆನ್ನಿಗೆ ಚೂರಿ ಹಾಕಲು ಹೊರಟ ಸಿದ್ದರಾಮಯ್ಯ ಮನೆಗೆ ಹೋದರು. ಸಿಎಂ ಸಿದ್ದರಾಮಯ್ಯ ಅವರು ಇವತ್ತು ಮಾನಸಿಕ ಅಸಮತೋಲನಕ್ಕೆ ಒಳಗಾಗಿದ್ದಾರೆ ಎಂದು ಟೀಕಿಸಿದರು.
ನಾನು ಕುರುಬ ಸಮುದಾಯಕ್ಕೆ ಸೇರಿದವನು. ಅದಕ್ಕೆ ನನ್ನ ಬೆಳವಣಿಗೆ ಸಹಿಸಲಾಗದೇ ಷಡ್ಯಂತ್ರ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಆಪಾದಿಸುತ್ತಾರೆ. ಆದರೆ, ಇದೇ ಕುರಿ ಕಾಯುವವನನ್ನು ಜಾತ್ಯತೀತ ದಳ ಎರಡು ಬಾರಿ ಡಿಸಿಎಂ ಹಾಗೂ ಹಣಕಾಸು ಸಚಿವರನ್ನಾಗಿ ಮಾಡಿತ್ತು. ದೇವೇಗೌಡರು ಅಧಿಕಾರ ನೀಡದೆ ಹೋಗಿದ್ದರೇ ಇವರ ಅಸ್ತಿತ್ವವೇ ಇರುತ್ತಿರಲಿಲ್ಲ ಎಂದರು.