ಬೆಂಗಳೂರು: ರಾಜ್ಯ ರಾಜಕಾರಣ ಒಂದು ಹಂತ ತಲಪಿದೆ. ಕೊನೆಗೂ ಯಾವುದೇ ಪ್ರತಿರೋಧ ವ್ಯಕ್ತಪಡಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪದತ್ಯಾಗಕ್ಕೆ ಒಪ್ಪಿಕೊಂಡಿದ್ದಾರೆ. ಯಾವುದೇ ಷರತ್ತುಗಳ ಇಲ್ಲ ಎಂದು ಹೇಳಲಲಾಗುತ್ತಿದ್ದರೂ ಸಿದ್ದರಾಮಯ್ಯ ಬಣ ಶಿವಕುಮಾರ್ ಅವರನ್ನು ಹದ್ದುಬಸ್ತಿನಲ್ಲಿಡಲು ಹಲವು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಒತ್ತಡ ಹೇರುತ್ತಿದೆ. ಜತೆಗೆ ತಮ್ಮ ಬಣದವರನ್ನೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೂರಿಸಬೇಕು ಎಂಬ ಷರತ್ತನ್ನೂ ಒಡ್ಟಿದೆ.
ಮುಖ್ಯಮಂತ್ರಿ ಆಗುವ ಡಿಕೆ ಶಿವಕುಮಾರ್ ಅವರನ್ನು ಹದ್ದುಬಸ್ತಿನಲ್ಲಿಡಲು ಕನಿಷ್ಠ ನಾಲ್ಕು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಬೇಡಿಕೆ ಇಟ್ಟಿದೆ. ಅಂದರೆ ಲಿಂಗಾಯತ, ಅಲ್ಪಸಂಖ್ಯಾತ ಮತ್ತು ದಲಿತ ಸಮುದಾಯಗಳಿಗೆ ಡಿಸಿಎಂ ಹುದ್ದೆ ನೀಡಬೇಕು ಎನ್ನುವುದು ಸಿದ್ದರಾಮಯ್ಯ ಅವರ ಆಗ್ರಹ. ಇದರಿಂದ ಮುಂಬರುವ ಚುನಾವಣೆಗಳಲ್ಲಿ ಅಹಿಂದ ಮತಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯ ಎಂದು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ.
ಜತೆಗೆ ತಮ್ಮ ಆಪ್ತ ಲೋಕೋಪಯೋಗಿ ಸಚಿವ ಸತೋಶ ಜಾರಕಿಹೊಳಿ ಅವರನ್ನೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕು ಮತ್ತು ಸಚಿವ ಸ್ಥಾನದಲ್ಲೂ ಮುಂದುವರೆಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಆಸಕ್ತಿ ಹೊಂದಿಲ್ಲ. ಹೈಕಮಾಂಡ್ ಒತ್ತಡ ಹೇರಿದರೆ ಒಂದು ಡಿಸಿಎಂ ಹುದ್ದೆ ಸಾಕು ಎನ್ನವುದು ಅವರ ವಾದ.
ಇನ್ನು ರಾಜ್ಯಸಭೆ ಪ್ರವೇಶಿಸಲು ಸಿದ್ದರಾಮಯ್ಯ ಇನ್ನೂ ನಿರ್ಧಾರ ಕೈಗೊಂಡಿಲ್ಲ. ತಮ್ಮ ಆಪ್ತರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ವರಿಷ್ಠರಿಗೆ ತಿಳಿಸಿದ್ದಾರೆ. ಇಂದು ನಾಳೆ ಸಾಧಕಭಾದಕಗಳನ್ನು ಕುರಿತು ಆಪ್ತ ಸಚಿವರು ಶಾಸಕರೊಂದಿಗೆ ಮಾತುಕತೆ ನಡೆಸಿ ತೀರ್ಮಾನಿಸಲಿದ್ದಾರೆ.