ದಾವಣಗೆರೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಭವ್ಯ ಶ್ರೀರಾಮ ಮಂದಿರದ ಮೇಲೆ ಬಾಂಬ್ ದಾಳಿ ನಡೆಸಲು ಉಗ್ರರು ಹೆಣೆದಿದ್ದ ಭೀಕರ ಸಂಚೊಂದನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಆಘಾತಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಹರಿಹರದಲ್ಲಿ ಶಂಕಿತ ಉಗ್ರನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಿಚಾರಣೆಯ ವೇಳೆ ಬೆಚ್ಚಿಬೀಳಿಸುವಂತಹ ಹಲವು ಸ್ಪೋಟಕ ಮಾಹಿತಿಗಳು ಹೊರಬಂದಿವೆ.
ರಾಮ ಮಂದಿರವನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ಎಸಗಲು ಉಗ್ರ ಸಂಘಟನೆಗಳು ಸ್ಕೆಚ್ ಹಾಕಿದ್ದವು ಎಂಬ ಸಂಗತಿ ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. ದಾವಣಗೆರೆಯಲ್ಲಿ ಸಿಕ್ಕಿಬಿದ್ದಿರುವ ಶಂಕಿತ ಉಗ್ರ ಸುಹೇಲ್ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಘೋರ ಯೋಜನೆಯ ಪೂರ್ಣ ವಿವರಗಳು ಲಭ್ಯವಾಗಿವೆ. ದೇಶದ ಕೋಟ್ಯಂತರ ಜನರ ಆರಾಧ್ಯ ದೈವದ ಸನ್ನಿಧಿಯಲ್ಲೇ ರಕ್ತಪಾತ ಹರಿಸಲು ಉಗ್ರರು ಹೊಂಚು ಹಾಕಿದ್ದರು ಎಂಬ ವಿಷಯ ಭದ್ರತಾ ಸಂಸ್ಥೆಗಳನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಬಂಧಿತ ಶಂಕಿತ ಉಗ್ರ ಸುಹೇಲ್, ನಿಷೇಧಿತ ಉಗ್ರಗಾಮಿ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಮಂದಿರದ ಮೇಲೆ ಬಾಂಬ್ ದಾಳಿ ನಡೆಸಲು ಬೇಕಾದ ಪೂರ್ವಸಿದ್ದತೆ ಹಾಗೂ ಸ್ಥಳೀಯವಾಗಿ ನೆರವು ನೀಡುವ ಜವಾಬ್ದಾರಿಯನ್ನು ಹೊತ್ತಿದ್ದ ಎನ್ನಲಾಗಿದೆ. ದಾಳಿಗೆ ಸೂಕ್ತ ಸಮಯ ಮತ್ತು ಸಂದರ್ಭವನ್ನು ಎದುರುನೋಡುತ್ತಿದ್ದ ಈ ಜಾಲದ ಕೊಂಡಿಯಾಗಿ ಆತ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಸದ್ಯ ಪೊಲೀಸರು ಆತನ ಇಂಚಿಂಚು ಚಲನವಲನ ಹಾಗೂ ಸಂಪರ್ಕಗಳ ಬೆನ್ನು ಬಿದ್ದಿದ್ದಾರೆ.
-. ರಾಷ್ಟ್ರೀಯ ಭದ್ರತೆಗೆ ಸವಾಲಾಗಿದ್ದ ಈ ದೊಡ್ಡ ಸಂಚನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ಈಗ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಈ ಕೃತ್ಯದ ಹಿಂದೆ ಅಂತರರಾಷ್ಟ್ರೀಯ ಮಟ್ಟದ ಉಗ್ರರ ಕೈವಾಡವಿದೆಯೇ ಅಥವಾ ಸ್ಥಳೀಯ ಸ್ವೀಪರ್ ಸೆಲ್ಗಳು ಕೆಲಸ ಮಾಡುತ್ತಿವೆಯೇ ಎಂಬ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ. ಈ ಘಟನೆಯ ಬೆನ್ನಲ್ಲೇ ಅಯೋಧ್ಯೆಯ ರಾಮ ಮಂದಿರ ಸೇರಿದಂತೆ ದೇಶದ ಪ್ರಮುಖ ಧಾರ್ಮಿಕ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.