ಬೆಂಗಳೂರು: ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ನಡೆಯುವಾಗ ಮಸೀದಿ ಮೇಲಿಂದ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಶಿಕ್ಷಿಸಬೇಕು ಎಂದು ಬಿಜೆಪಿ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ, ಕೇಂದ್ರ ಸಚಿವ ವಿ.ಸೋಮಣ್ಣ, ಅರ್. ಅಶೋಕ್, ಎನ್ ರವಿಕುಮಾರ್ ಮೊದಲಾದವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿ, ಮತಾಂಧ ಯುವಕರ ಗುಂಪು ಶಿವಾಜಿ ಜಯಂತಿಯ ಪ್ರಯುಕ್ತ ನಡೆದ ಮೆರವಣಿಗೆಯ ಮೇಲೆ ಕಲ್ಲು ಹಾಗೂ ಚಪ್ಪಲಿ ಎಸೆದು ದುಷ್ಕೃತ್ಯ ಮೆರೆದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಓಲೈಕೆಯ ರಾಜಕಾರಣದ ಪರಿಣಾಮವಾಗಿ ಇಂದು ಕರ್ನಾಟಕ ಅಶಾಂತಿಯ ತಾಣವಾಗಿ ಮಾರ್ಪಟ್ಟಿದೆ.
ಶಾಂತಿಯುತವಾಗಿ ಸಾಗುವ ಹಿಂದೂ ಮೆರವಣಿಗೆಗಳ ಮೇಲೆ ಕಲ್ಲೆಸೆಯುವ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ಇಂತಹ ಕಿಡಿಗೇಡಿಗಳನ್ನು ಶಿಕ್ಷಿಸುವ ಮೂಲಕ, ಈ ಮನಸ್ಥಿತಿಗೆ, ಮಾನಸಿಕತೆಗೆ ತಿಲಾಂಜಲಿ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬಾಗಲಕೋಟೆಯಲ್ಲಿ ದುಷ್ಕೃತ್ಯ ಎಸಗಿದ ಮತಾಂಧ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಿದ್ದಾರೆ.
ರಾಜ್ಯ ಬಿಜೆಪಿ ಘಟಕವೂ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ಎಕ್ಸ್ ನಲ್ಲಿ ಬಾಗಲಕೋಟೆಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಮೇಲೆ ಜಿಹಾದಿ ಮನಸ್ಥಿತಿಯ "ಕಾಂಗ್ರೆಸ್ ಬ್ರದರ್ಸ್" ಕಲ್ಲು ತೂರಿ ವಿಕೃತಿ ಮೆರೆದಿರುವುದು ಖಂಡನೀಯ.
ತುಘಲಕ್ @INCKarnataka ಸರ್ಕಾರದ ಓಲೈಕೆ ನೀತಿಯಿಂದ ಹಿಂದೂಗಳು ಪ್ರತಿ ಬಾರಿಯೂ ತಮ್ಮ ಧಾರ್ಮಿಕ ಆಚರಣೆಗಳನ್ನು ಭಯದಲ್ಲೇ ಆಚರಿಸಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ಬಂದೊದಗಿದೆ. ಗಣೇಶ ಉತ್ಸವದ ಮೇಲೆ ಕಲ್ಲು, ಹನುಮ ಮಾಲಾಧಾರಿಗಳ ಯಾತ್ರೆಗೆ ತಡೆ, ಹನುಮಾನ್ ಚಾಲೀಸಾ ಪಠಿಸಿದವರ ಮೇಲೆ ಹಲ್ಲೆ, ಓಂ ಶಕ್ತಿ ಭಕ್ತರ ಮೇಲೆ ದಾಳಿ ನಡೆದಿರುವುದು ಕಾಂಗ್ರೆಸ್ ಸರ್ಕಾರ ಘಾತುಕರ ಪರ ಮೃದುಧೋರಣೆ ಹೊಂದಿರುವುದಕ್ಕೆ ಸಾಕ್ಷಿ.
ಮುಖ್ಯಮಂತ್ರಿ @siddaramaiah ನವರೇ, ಮೆರವಣಿಗೆ ಮೇಲೆ ಕಲ್ಲು ತೂರುವ ಧೈರ್ಯ ಮತಾಂಧರಿಗೆ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದೆ.