ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಚಪ್ಪಲಿ ಎಸೆತ ನಡೆಸಿದ ಆರೋಪದಡಿಯಲ್ಲಿ8 ಮಂದಿಯನ್ನು ಬಂಧಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲೆ ಎಸ್ ಪಿ ಸಿದ್ಧಾರ್ಥ್ ಗೋಯೆಲ್ ತಿಳಿಸಿದ್ದಾರೆ..
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದರು.
ಮಸೀದಿಯೊಳಗೆ ಕೆಲವರು ಇದ್ದರೆ, ಇನ್ನು ಕೆಲವರು ಪ್ರಾರ್ಥನೆ ಮುಗಿಸಿಕೊಂಡು ಹೋಗಿದ್ದರು. ಮಸೀದಿಯಲ್ಲಿ ಕಲ್ಲಿನಿಂದ ಚಪ್ಪಲಿ ಸ್ಟ್ಯಾಂಡ್ ಮಾಡಲಾಗಿತ್ತು. ಇದರಿಂದ ಎತ್ತಿಕೊಂಡು ಕಲ್ಲು ಎಸೆದ 28 ವರ್ಷದ ತನ್ವೀರ್ ಎಂಬಾತನನ್ನು ಬಂಧಿಸಿ ಎ-1 ಆರೋಪಿ ಮಾಡಲಾಗಿದೆ. ಈತನೊಬ್ಬನನ್ನು ಹೊರತುಪಡಿಸಿ ಬೇರೆ ಯಾರೊಬ್ಬರೂ ಕಲ್ಲು ಎಸೆದಿಲ್ಲ ಎಂದು ಎಸ್ ಪಿ ತಿಳಿಸಿದ್ದಾರೆ.
ತರಕಾರಿ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗುತ್ತದೆ. ಪೊಲೀಸರು ಕರ್ತವ್ಯ ನಿರತ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದ್ದು, ಎಸ್ಪಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆಯನ್ನು ಫೆಬ್ರವರಿ 24ರವರೆಗೆ ವಿಸ್ತರಿಸಲಾಗಿದ್ದು, ಹೆಚ್ಚುವರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಗುರುವಾರ ಸಂಜೆ 5 ಗಂಟೆ ವೇಳೆಗೆ ಶಿವಾಜಿ ಮಹಾರಾಜ ಜಯಂತಿ ಪ್ರಯುಕ್ತ ಮೆರವಣಿಗೆ ಆರಂಭವಾಗಿತ್ತು. ಮೆರವಣಿಗೆಯು ಪಂಕಾ ಮಸೀದಿ ಮುಂದೆ ಬರುವ ಮುನ್ನವೇ ಗಲಾಟೆ ಆರಂಭವಾಗಿತ್ತು. ರಾತ್ರಿ 10 ಗಂಟೆ 6 ನಿಮಿಷಕ್ಕೆ ಸರಿಯಾಗಿ ಗಲಾಟೆ ನಡೆದಿತ್ತು.