2026-03-07 05:51:00

Scam Alert | ಹೋಳಿ ಹಬ್ಬದ ಹೆಸರಲ್ಲಿ ಬರ್ತಿದೆ ನಕಲಿ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆ ಖಾಲಿ | Speed News Kannada

Scam Alert | ಹೋಳಿ ಹಬ್ಬದ ಹೆಸರಲ್ಲಿ ಬರ್ತಿದೆ ನಕಲಿ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆ ಖಾಲಿ | Speed News Kannada

ಹೋಳಿ ಹಬ್ಬವನ್ನು ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸಲು ಸೈಬರ್ ಅಪರಾಧಿಗಳು ಹೊಂಚು ಹಾಕಿದ್ದಾರೆ. ಹಬ್ಬದ ಪ್ರಯುಕ್ತ ನಕಲಿ ಆಫರಳು, ಪಾರ್ಟಿ ಪಾಸ್‌ಗಳು, ಶಾಪಿಂಗ್ ಡೀಲ್ಸ್ ಮತ್ತು ಗಿಫ್ಟ್ ಲಿಂಕ್‌ಗಳ ಹೆಸರಿನಲ್ಲಿ ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿ ಜನರನ್ನು ವಂಚಿಸುವ ಘಟನೆಗಳು ಹೆಚ್ಚಾಗುತ್ತಿವೆ. ಹೌದು ಬಣ್ಣಗಳ ಹಬ್ಬ ಹೋಳಿ ಸಂಭ್ರಮದ ನಡುವೆಯೇ ಸಾರ್ವಜನಿಕರನ್ನು ಪಂಗನಾಮ ಹಾಕಲು ಸೈಬರ್ ವಂಚಕರು ಹೊಸ ಜಾಲ ಹೆಣೆದಿದ್ದಾರೆ. "ಹೋಳಿ ಹಬ್ಬದ ಉಚಿತ ಉಡುಗೊರೆ", "ಲಕ್ಕಿ ಡ್ರಾ” ಅಥವಾ “ಬಂಪರ್ ಡಿಸ್ಕಂಟ್" ಎಂಬ ಆಕರ್ಷಕ ಹೆಸರಿನಲ್ಲಿ ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಲಿಂಕ್‌ಗಳನ್ನು ಹರಿಬಿಡಲಾಗುತ್ತಿದೆ. ಹಬ್ಬದ ಆತುರದಲ್ಲಿರುವ ಜನರನ್ನು ಗುರಿಯಾಗಿಸಿಕೊಂಡು ಈ ಲಿಂಕ್‌ಗಳನ್ನು ಕ್ಲಿಕ್ ಮಾಡುವಂತೆ ಪ್ರೇರೇಪಿಸಿ, ಅವರ ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕ್ ವಿವರಗಳನ್ನು ಕದ್ದು ಕ್ಷಣಾರ್ಧದಲ್ಲಿ ಖಾತೆಯನ್ನು ಖಾಲಿ ಮಾಡಲಾಗುತ್ತಿದೆ. ಈ ಕುರಿತು ಸೈಬರ್ ಪೊಲೀಸ್ ವಿಭಾಗವು ಜನರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಅಪರಿಚಿತ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಲು ಸೂಚಿಸಿದೆ. 

ಹಬ್ಬದ ನೆಪದಲ್ಲಿ ಭಾರಿ ರಿಯಾಯಿತಿ, ಉಚಿತ ಉಡುಗೊರೆಗಳು ಎಂದು ಬರುವ ಮೆಸೇಜ್‌ಗಳು ಮತ್ತು ಲಿಂಕ್‌ಗಳ ಬಗ್ಗೆ ವಿಶೇಷ ಜಾಗ್ರತೆ ವಹಿಸಬೇಕೆಂದು ಸೈಬರ್ ತಜ್ಞರು ಸೂಚಿಸಿದ್ದಾರೆ.
* ನಕಲಿ ಶಾಪಿಂಗ್ ವೆಬ್‌ಸೈಟ್‌ಗಳು: ನಕಲಿ ಸೈಟ್ ಮೂಲಕ ಭಾರಿ ರಿಯಾಯಿತಿಯ ಆಮಿಷವೊಡ್ಡುವುದು.
* ನಕಲಿ ಪಾರ್ಟಿ ಪಾಸ್‌ಗಳು: ಹೋಲಿ ಪಾರ್ಟಿ ಪಾಸ್ ಹೆಸರಿನಲ್ಲಿ ನಕಲಿ ಟಿಕೆಟ್ ಮಾರಾಟ ಮಾಡುವುದು.
* ಗಿಫ್ಟ್ ವೋಚರ್ ಆಮಿಷ ನೀವು ಗಿಫ್ಟ್ ವೋಚರ್ ಗೆದ್ದಿದ್ದೀರಿ ಎಂದು ಹೇಳಿ ಅನುಮಾನಾಸ್ಪದ ಲಿಂಕ್‌ಗಳನ್ನು ಕಳುಹಿಸುವುದು.
* ಮಾಹಿತಿ ಕಳವು: ಬ್ಯಾಂಕ್ ವಿವರಗಳು ಮತ್ತು OTP ಪಡೆದು ಹಣ ದೋಚುವುದು.

ವಹಿಸಬೇಕಾದ ಜಾಗ್ರತೆಗಳು:
* ಹೊಸ ಅಥವಾ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
* ನಿಮ್ಮ OTP, ಬ್ಯಾಂಕ್ ವಿವರಗಳು ಅಥವಾ ಕಾರ್ಡ್ ವಿವರಗಳನ್ನು ಯಾರಿಗೂ ನೀಡಬೇಡಿ.
* ಅಧಿಕೃತ ಮತ್ತು ವಿಶ್ವಾಸಾರ್ಹ ಪ್ಲಾಟ್‌ಫಾರ್ಮ್‌ಗಳ ಮೂಲಕವೇ ಹಣ ಪಾವತಿಸಿ.
* ಅಪರಿಚಿತ ಕರೆಗಳು ಅಥವಾ ಮೆಸೇಜ್‌ಗಳನ್ನು ನಂಬಬೇಡಿ.
ವಂಚನೆಗೊಳಗಾದರೆ ಏನು ಮಾಡಬೇಕು? ಒಂದು ವೇಳೆ ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ, ತಕ್ಷಣವೇ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕು. ಅಲ್ಲದೆ, ಕೇಂದ್ರ ಸರ್ಕಾರದ ಅಧಿಕೃತ ಸೈಬರ್ ಕ್ರೈಮ್ ಪೋರ್ಟಲ್ (cybercrime.gov.in) ನಲ್ಲಿ ದೂರನ್ನು ದಾಖಲಿಸುವುದು ಉತ್ತಮ.ಹಬ್ಬದ ಸಂಭ್ರಮದ ನಡುವೆ ಡಿಜಿಟಲ್ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಬಹಳ ಮುಖ್ಯ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.