ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳನ್ನು ದುರ್ಬಳಕೆಮಾಡಿಕೊಂಡು ಕೆಟ್ಟದ್ದಾಗಿ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾನೂನು ಪ್ರಕೋಷ್ಠ ತಂಡ ಇಂದು ಉತ್ತರ ವಿಭಾಗದ ಸೈಬರ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ದೂರುಗಳನ್ನು ದಾಖಲಿಸಿದೆ.
ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ರವರ ಫೋಟೋಗಳನ್ನು ಅತ್ಯಂತ ಹೀನಾಯವಾಗಿ ಸೃಜಿಸಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಬಿತ್ತರಿಸಿರುವ "Siddu sid" ಎಂಬ ವ್ಯಕ್ತಿ ವಿರುದ್ಧ ದೂರು ಸಲ್ಲಿಸಲಾಗಿದೆ.
ಎರಡನೆಯದಾಗಿ ಪ್ರಧಾನಿ ನರೇಂದ್ರ ಮೋದಿ ರವರ ಫೋಟೋವನ್ನು ದುರ್ಬಳಕೆ ಮಾಡಿ ರಾಜ್ಯದಲ್ಲಿ ಶಾಂತಿ ಭಂಗ ಮಾಡುವ ಉದ್ದೇಶದಿಂದ ಫೇಸ್ ಬುಕ್ ನಲ್ಲಿ ಸುಳ್ಳು ಸುದ್ದಿಹರಡಿ ದೇಶದ್ರೋಹ ಕೆಲಸ ಮಾಡುತ್ತಿರುವ ಮೊಹಮ್ಮದ್ ಕಲಂದರ್ ಎಂಬ ವ್ಯಕ್ತಿ ವಿರುದ್ಧ ದೂರು ಸಲ್ಲಿಸಿ FIR ದಾಖಲಿಸಲಾಗಿದೆ.
ಮೂರನೆಯದಾಗಿ ಕರ್ನಾಟಕ ಪ್ರದೇಶ ಯೂಥ್ ಕಾಂಗ್ರೆಸ್ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಪ್ರಧಾನ ಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳ ಫೋಟೋ ಬಳಸಿಕೊಂಡು ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರವರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ ಮಾಡಿ ರಾಜಕೀಯ ದ್ವೇಷಕ್ಕೆ ಪ್ರೇರೇಪಿಸುತ್ತಿರುವವರ ವಿರುದ್ಧವೂ ದೂರು ಸಲ್ಲಿಸಲಾಯಿತು ಎಂದು ಬಿಜೆಪಿ ತಿಳಿಸಿದೆ.