2026-05-05 08:00:49

respect constitution; r ashok to cm siddaramaiah| ಸಂವಿಧಾನಕ್ಕೆ ಗೌರವ ಕೊಡಿ: ಸಿಎಂ ಸಿದ್ದರಾಮಯ್ಯಗೆ ಆರ್. ಅಶೋಕ್‌ ಆಗ್ರಹ|Speed News Kannada

respect constitution; r ashok to cm siddaramaiah| ಸಂವಿಧಾನಕ್ಕೆ ಗೌರವ ಕೊಡಿ: ಸಿಎಂ ಸಿದ್ದರಾಮಯ್ಯಗೆ ಆರ್. ಅಶೋಕ್‌ ಆಗ್ರಹ|Speed News Kannada

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಚ್ಚು ಹುಚ್ಚಾಗಿ ಹೇಳಿಕೆ ಕೊಡುವುದು ಒಳ್ಳೆಯದಲ್ಲ; ಗೆದ್ದವರಿಗೆ ಸಂವಿಧಾನ ತಿಳಿಸಿದಂತೆ ಗೌರವ ಕೊಡುವುದು ಕರ್ತವ್ಯ. ಅದನ್ನು ಉಲ್ಲಂಘಿಸುವುದು ಅಕ್ಷಮ್ಯ ಅಪರಾಧ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋಥ್‌ ಅವರಿಗೆ ಇಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಮತ್ತು ಮರು ಮತ ಎಣಿಕೆ ಬಳಿಕ ಶೃಂಗೇರಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಡಿ.ಎನ್.ಜೀವರಾಜ್ ಅವರ ಜೊತೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಮನವಿ ಸಂಬಂಧ ರಾಜ್ಯ ಸರಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಇನ್ನೊಂದು ಗಂಟೆಯಲ್ಲಿ ಪತ್ರ ಬರೆಯಬಹುದು ಎಂದು ತಿಳಿಸಿದರು.

ಸಂವಿಧಾನದತ್ತವಾಗಿ ಸ್ಪೀಕರ್ ಅವರು ಶಾಸಕತ್ವದ ಪ್ರಮಾಣವಚನ ಬೋಧಿಸಬೇಕು. ಇಲ್ಲವಾದರೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಬೇಕುಕಾಗುತ್ತದೆ. ಇಲ್ಲಿಯೇ ನಾವು ಪ್ರತಿಜ್ಞಾವಿಧಿ ಪಡೆಯುತ್ತೇವೆ. ಹಾಗಾದರೆ ಸ್ಪೀಕರ್ ಅವರಿಗೆ ಏನು ಗೌರವ ಉಳಿಯಲಿದೆ ಎಂದು ಕೇಳಿದರು.

ತಮಿಳುನಾಡಿನಲ್ಲಿ ಚಿತ್ರನಟ ವಿಜಯ್ ದಿಢೀರ್ ಆಗಿ ಹೆಚ್ಚು ಸ್ಥಾನ ಪಡೆದರೂ ಅವರಿಗೆ ಬಹುಮತ ಸಿಕ್ಕಿಲ್ಲ. ಕಾಂಗ್ರೆಸ್ಸಿನವರು ಎಲ್ಲಿ ಊಟ ಚೆನ್ನಾಗಿ ಸಿಗುತ್ತದೋ ಅಲ್ಲಿಗೆ ಓಡಿ ಹೋಗುತ್ತಾರೆ. ಅವರಿಗೆ ನೀತಿ, ನಿಯತ್ತು, ನ್ಯಾಯ, ಧರ್ಮ ಏನೂ ಇಲ್ಲ. ಇಷ್ಟು ದಿನ ನಮ್ಮ ಡಿಎಂಕೆ ಎಂದು ಹಾಡಿ ಹೊಗಳಿದರು. ಈಗ ಕಾಂಗ್ರೆಸ್ಸಿನ ತಮಿಳುನಾಡು ಘಟಕವು ವಿಜಯ್ ಗೆ ಬೆಂಬಲ ನೀಡಬೇಕೆಂದು ತೀರ್ಮಾನಿಸಿದೆ. ಇವರಿಗೆ ನಾಚಿಕೆ ಆಗಬೇಕು ಎಂದರು.

ಇಂಡಿ ಒಕ್ಕೂಟವು ಕಳ್ಳರ ಒಕ್ಕೂಟದಂತೆ. ಕಾಂಗ್ರೆಸ್ಸಿನವರನ್ನು ನಂಬಬೇಡಿ ಎಂದು ನರೇಂದ್ರ ಮೋದಿಯವರು ಬಹಳ ದಿನಗಳಿಂದ ಹೇಳುತ್ತಿದ್ದಾರೆ. ತಮಿಳುನಾಡಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷವು ಡಿಎಂಕೆಗೆ ಕೈಕೊಡುವುದು ಸ್ಪಷ್ಟಗೊಂಡಿದೆ ಎಂದು ಹೇಳಿದರು.

ಕಾಂಗ್ರೆಸ್ಸಿಗೆ ಸಿದ್ಧಾಂತ, ನ್ಯಾಯ ನೀತಿ ಇಲ್ಲ; ಗೆದ್ದೆತ್ತಿನ ಬಾಲ ಹಿಡಿಯುವುದೇ ಕಾಂಗ್ರೆಸ್ಸಿನ ಧರ್ಮ ಎಂದು ಆರೋಪಿಸಿದರು. ಚಿನ್ನ, ಗ್ಯಾಸ್, ಸೀರೆ, ಓಲೆ ಕೊಡುವುದಾಗಿ ಹೇಳಿದ್ದಾರೆ. ಒಂದು ವರ್ಷ ಬಿಡಿ. ಏನೆಲ್ಲ ಕೊಡುತ್ತಾರೆ ನೋಡೋಣ. ವಿಜಯ್ ಅವರ ಸರಕಾರಕ್ಕೆ ಎಲ್ಲಿಂದ ಬೆಂಬಲ ಸಿಗಲಿದೆ? ಕಾಂಗ್ರೆಸ್ಸಿನವರು ಅವರಿಗೆ ಯಾವ ರೀತಿ ಬೆಂಬಲ ನೀಡುತ್ತಾರೆಂದು ನೋಡೋಣ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಹಿಂದುತ್ವ ತೊಲಗಲಿ ಎಂದು ಹೇಳಿದ ಡಿಎಂಕೆ ನಾಯಕರು ತೊಲಗಿದ್ದಾರೆ. ಹಿಂದುತ್ವದ ವಿಚಾರಕ್ಕೆ ಬಂದರೆ ಯಾವ ಗತಿ ಆಗುತ್ತದೆ ಎಂಬುದು ಸ್ಟಾಲಿನ್ ಮತ್ತವರ ಸುಪುತ್ರನಿಗೆ ತಮಿಳುನಾಡಿನ ಜನರು ತೋರಿಸಿದ್ದಾರೆ ಎಂದು ಹೇಳಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.