ತುಮಕೂರು: ಸರ್ಕಾರದ ಪರವಾನಗಿ ಪಡೆದ ಭೂಮಾಪಕರ ಸೇವೆ ಕಾಯಂ ಮಾಡಲು ಸಾಧ್ಯವಿಲ್ಲ. ಆದರೆ ಅವರ ಉಳಿದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಭೂಮಾಪಕರ ಜತೆಗೆ ಮಾತುಕತೆ ನಡೆಸಿದ್ದಾಗಲೇ ಈ ಈ ವಿಷಯವನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಸೇವೆ ಕಾಯಂ ಅಥವಾ ವೇತನ ನಿಗದಿಪಡಿಸುವಂತೆ ಪರವಾನಗಿ ಭೂಮಾಪಕರು ಪಟ್ಟು ಹಿಡಿದಿದ್ದಾರೆ. ಸೇವೆ ಕಾಯಂ ಮಾಡುವ ಆಯ್ಕೆ ಸರ್ಕಾರದ ಮುಂದಿಲ್ಲ. ಅವರ ಆದಾಯಕ್ಕೆ ಯಾವುದೇ ಕೊರತೆ ಆಗುತ್ತಿಲ್ಲ. ಕೆಲಸಕ್ಕೆ ತಕ್ಕ ಗೌರವ ಧನ ಕೊಡಲಾಗುತ್ತಿದೆ. ಉತ್ತಮವಾಗಿ ಕೆಲಸ ಮಾಡುವವರಿಗೆ ಉತ್ತಮ ಸಂಭಾವನೆ ದೊರೆಯುತ್ತಿದೆ ಎಂದರು.
ಭೂಮಾಪಕರು ಕಳೆದ ಮೂರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದು, ಕಂದಾಯ ಇಲಾಖೆ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿವೆ. ಈ ನಿಟ್ಟಿನಲ್ಲಿ ಅವರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.
ಕಳೆದ 20 ವರ್ಷದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ಬಹಳಷ್ಟು ಕಡಿಮೆಯಾಗಿದೆ. ಒಳ್ಳೆಯ ಕೆಲಸ ಮಾಡುವ ಅರ್ಧದಷ್ಟು ಮಾತ್ರ ಇದ್ದಾರೆ. ನಾವು ತಾಕೀತು ಮಾಡಿದರೆ ಕೆಲವರು ಕೆಲಸ ಮಾಡುತ್ತಾರೆ. ಇದೆಲ್ಲದಕ್ಕೂ ಮೀರಿದವರೂ ಒಂದಷ್ಟು ಜನರಿದ್ದಾರೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಲು ಆಗುವುದಿಲ್ಲ ಎಂದರು.