ನೆಲಮಂಗಲ: ಕೆನಡಾದಲ್ಲಿ ಉದ್ಯೋಗಿಯಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ವ್ಯಕ್ತಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿ ಚಂದನ್ ಕುಮಾರ್ (37) ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮದ ಮೂಲದವರು. ಇವರು ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ಎಲ್ ಅಂಡ್ ಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ನಿನ್ನೆ ಚಂದನ್ ಕೆನಡಾದ ವುಡ್ ಬೈನ್ ಮಾಲ್ ಬಳಿ ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ೇಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಚಂದನ್ ತಂದೆ ನಂದಕುಮಾರ್ ಅವರು ನಿವೃತ್ತ ಶಿಕ್ಷಕರಾಗಿದ್ದು ನಿನ್ನೆ ರಾತ್ರಿ ಅವರಿಗೆ ಮಃಇತಿ ನೀಡಲಾಗಿದೆ. ಚಂದನ್ ತನ್ನ ಕೆಲಸದ ಜೊತೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿದೇಶದಲ್ಲಿ ಹರಡುತ್ತಿದ್ದರು. ಉದ್ಯೋಗ ಹುಡುಕಿಕೊಂಡು ಕೆನಡಾಗೆ ಹೋದ ಕನ್ನಡಿಗರಿಗೆ ನೆರವಾಗುತ್ತಿದ್ದರು.
ಸಂಸದ ಸುಧಾಕರ್ ಭರವಸೆ:
ಸಂಸದ ಡಾ.ಕೆ ಸುಧಾಕರ್ ಪ್ರತಿಕ್ರಿಯಿಸಿ ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಐಟಿ ಉದ್ಯೋಗಿಯಾಗಿ ನೆಲೆಸಿದ್ದ ನಮ್ಮ ಕರ್ನಾಟಕ ಮೂಲದ ಚಂದನ್ ಕುಮಾರ್ ಅವರು ಶನಿವಾರ ಅಲ್ಲಿ ನಡೆದ ಶೂಟೌಟ್ ನಲ್ಲಿ ಹತ್ಯೆಗೀಡಾಗಿರುವುದು ನಮ್ಮೆಲ್ಲರಿಗೂ ಅತ್ಯಂತ ಆಘಾತಕಾರಿ ಮತ್ತು ದುಃಖಕರ ಸಂಗತಿ.
ಮೃತ ದುರ್ದೈವಿ ಚಂದನ್ ಕುಮಾರ್ ಅವರ ತಂದೆ, ತಾಯಿ ಹಾಗೂ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತಾ, ಕೇಂದ್ರ ವಿದೇಶಾಂಗ ಸಚಿವಾಲಯದ ಸಹಕಾರದೊಂದಿಗೆ ಅವರ ಮೃತದೇಹವನ್ನು ಆದಷ್ಟು ಶೀಘ್ರದಲ್ಲಿ ಭಾರತಕ್ಕೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.