ಬೆಂಗಳೂರು: ಚಂದನವನದ ಮೇಲೆ ನಟ, ನಿರ್ಮಾಪಕ, ನಿರ್ದೇಶಕ ವಿ. ರವಿಚಂದ್ರನ್ ಅವರಿಗೆ ಇರುವ ಕಾಳಜಿ ಅಪಾರ. ಕನ್ನಡ ಚಿತ್ರರಂಗದ ಮೇಲೆ ಅಪಾರ ಗೌರವ ಪ್ರಿತಿ ಹೊಂದಿದ್ದಾರೆ. ಇಡೀ ದೇಶದಲ್ಲೇ ಕನ್ನಡ ಚಿತ್ರರಂಗ ಉತ್ತುಂಗ ಸ್ಥಿತಿ ತಲುಪಬೇಕು ಎನ್ನುವುದು ಅವರ ಅದಮ್ಯ ಆಸೆ.
ಇದೇ ಆಸೆಯಿಂದ ಅವರು 100 ರೂಪಾಯಿ ಕೊಟ್ಟು ಕನ್ನಡ ಸಿನಿಮಾ ನೋಡಿ, ನಿಮಗೇನೂ ನಷ್ಟ ಆಗಲ್ಲ ಎಂದು ಕನ್ನಡ ಪ್ರೇಕ್ಷಕರಿಗೆ ಕರೆ ನೀಡಿದ್ದರು.
ಇತ್ತೀಚಿಗೆ ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ನಲ್ಲಿ ಮಾತನಾಡಿದ ರವಿಚಂದ್ರನ್, ‘ಜನರು ಹೆಚ್ಚೆಚ್ಚು ಥಿಯೇಟರ್ ಗೆ ಹೋಗಬೇಕು. 100 ರೂಪಾಯಿ ಕೊಟ್ಟು ಸಿನಿಮಾ ನೋಡಲ್ವಾ.? ಸಿನಿಮಾ ಚೆನ್ನಾಗಿಲ್ಲ ಎಂದರೂ 100 ರೂಪಾಯಿ ಕಳೆಯಿರಿ ತೊಂದರೆ ಇಲ್ಲ ಎಂದು ಪ್ರೀತಿಯಿಂದಲೇ ಹೇಳಿದ್ದರು.
ಪ್ರತಿ ವರ್ಷ ಒಂದಷ್ಟು ಸಿನಿಮಾ ಗೆಲ್ಲಿಸಿ, ಗಂಟೇನು ಹೋಗಲ್ಲ’ ಎಂದಿದ್ದರು.
ಕನ್ನಡದಲ್ಲಿ ವರ್ಷಕ್ಕೆ 200 ಸಿನಿಮಾಗಳು ಬಿಡುಗಡೆಯಾಗುತ್ತವೆ. 200 ಚಿತ್ರಗಳ ಪೈಕಿ 100 ಸಿನಿಮಾ ಗೆಲ್ಲಿಸ್ತೀನಿ ಎಂದು ಹೋದರೂ, 1 ಲಕ್ಷ ರೂಪಾಯಿ ಖರ್ಚಾಗುತ್ತದೆ. ಮಧ್ಯಮ ವರ್ಗದವರ ದುಡಿಮೆಯೇ ಕಡಿಮೆ. ಹೀಗಿರುವಾಗ ಒಂದು ಲಕ್ಷ ರೂಪಾಯಿ ಹಣವನ್ನು ಸಿನಿಮಾಗೆ ಸುರಿಯೋಕೆ ಸಾಧ್ಯವೇ ಎಂಬುದು ಜನಸಾಮಾನ್ಯರ ಪ್ರಶ್ನೆ. ಬಹುತೇಕ ಸಿನಿಮಾಗಳ ಕಥೆ, ನಿರೂಪಣೆ, ನಿರ್ದೇಶನ ಚೆನ್ನಾಗಿರೋದಿಲ್ಲ. ಅಗೊಮ್ಮೆ ಈಗೊಮ್ಮೆ ಒಂದು ಒಳ್ಳೆಯ ಸಿನಿಮಾ ಬಂದಾಗ ಜನರು ಅದನ್ನು ಗೆಲ್ಲಿಸಿದ್ದಾರೆ. ‘ಸು ಫ್ರಮ್ ಸೋ’, ‘ಶಾಖಾಹಾರಿ’ ಸಿನಿಮಾಗಳು ಇದಕ್ಕೆ ಉತ್ತಮ ಉದಾಹರಣೆ ಎಂದಿದ್ದಾರೆ. ರವಿಮಾಮನ ಕರೆಗೆ ಕನ್ನಡ ಪ್ರೇಕ್ಷಕ ಓಗೊಡುತ್ತಾನೆಯೇ ಕಾದು ನೋಡಬೇಕು.