ಇತ್ತೀಚೆಗೆ ವಿವಾಹವಾದ ದಕ್ಷಿಣ ಭಾರತದ ಸ್ಮಾರ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇದೀಗ ಮದುವೆ ಬಳಿಕವೂ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಗಮನ ಸೆಳೆದಿದೆ. ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ ಕೋಟಿ ಕೋಟಿ ಲೈಕ್ಸ್ ಗಳಿಸಿವೆ. ಮದುವೆಯ ನಂತರ ದಂಪತಿ ಮೊದಲಿಗೆ ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಆ ವೇಳೆ ಅಭಿಮಾನಿಗಳು ಅವರನ್ನು ಸುತ್ತುವರಿದು ಸಂಭ್ರಮ ವ್ಯಕ್ತಪಡಿಸಿದ್ದರು.
ಇದೀಗ ಸಂಪ್ರದಾಯದಂತೆ ಮದುವೆಯ ಬಳಿಕ ಹುಟ್ಟೂರಿಗೆ ಭೇಟಿ ನೀಡಿರುವ ದಂಪತಿ ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ತುಮ್ಮನಪೇಟೆಗೆ ಆಗಮಿಸಿದ್ದಾರೆ. ವಿಜಯ್ ದೇವರಕೊಂಡ ಅವರ ಸ್ವಂತ ಊರಿನಲ್ಲಿ ಇರುವ ಫಾರ್ಮ್ ಹೌಸ್ನಲ್ಲಿ ಇಂದು (ಮಾರ್ಚ್ 2) ಸತ್ಯನಾರಾಯಣ ಪೂಜೆ ನೆರವೇರಿಸಲಾಗಿದೆ. ಪೂಜೆಯ ಬಳಿಕ ಗ್ರಾಮದಲ್ಲಿನ 2000ಕ್ಕೂ ಹೆಚ್ಚು ಜನರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯರು ದಂಪತಿಯನ್ನು ಹೃತೂರ್ವಕವಾಗಿ ಸ್ವಾಗತಿಸಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹಲವಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ತಮ್ಮ ಸಂಬಂಧವನ್ನು ಬಹಿರಂಗಪಡಿಸದೆ ಇಟ್ಟಿದ್ದರು. ಇದೀಗ ವಿವಾಹದ ಮೂಲಕ ತಮ್ಮ ಪ್ರೀತಿಗೆ ಹೊಸ ಅರ್ಥ ನೀಡಿದ್ದಾರೆ. ಇವರು ಒಟ್ಟಿಗೆ ನಟಿಸುತ್ತಿರುವ ಹೊಸ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ.
ವಿವಾಹದ ವಿಚಾರದಲ್ಲಿ ಕೆಲವರು ಟೀಕೆ ಮಾಡಿದ್ದರೂ, ಅದಕ್ಕೆ ಹೆಚ್ಚು ಮಹತ್ವ ನೀಡದೆ ರಶ್ಮಿಕಾ ಮತ್ತು ವಿಜಯ್ ತಮ್ಮ ಜೀವನವನ್ನು ಸಂತೋಷದಿಂದ ಮುಂದುವರೆಸುತ್ತಿದ್ದಾರೆ.