ಬೆಂಗಳೂರು: ಗ್ರೇಟರ್ ಬೆಂಗಳೂರು ಉಸ್ತುವಾರಿ ನೀಡದೇ ಇರುವುದಕ್ಕೆ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ನನಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದಕ್ಕೆ ಧನ್ಯವಾದಗಳು. ನನ್ನ ಆತ್ಮಸಾಕ್ಷಿ ವಿರುದ್ದ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಆ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ. ನಾನು ಶಾಸಕನಾಗಿ, ಕಾರ್ಯಕರ್ತನಾಗಿ ಮುಂದುವರೆಯುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ನಂತರ ಕೋರಮಂಗಲದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ದಿ ಖಾತೆ ಸಿಗದಿದ್ದಕ್ಕೆ ಬೇಸರವಾಗಿದ್ದು ರಾಜೀನಾಮೆ ನೀಡಿದ್ದೇನೆ. ನನ್ನನ್ನು ಸಚಿವರಾಗಿ ಮಾಡಿ ಎಂದು ನಾನು ಕೇಳಿರಲಿಲ್ಲ. 53 ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದು ಎಲ್ಲ ಮುಖ್ಯಮಂತ್ರಿಗಳ ಜೊತೆ ಉತ್ತಮ ಕೆಲಸ ಮಾಡಿದ್ದೇನೆ ಎಂದರು.
2023ರಲ್ಲಿ ಸಿದ್ದರಾಮಯ್ಯ ಅವರೇ ನನ್ನನ್ನು ಕರೆದು ಸಚಿವರನ್ನಾಗಿ ಮಾಡಿದ್ದರು. ಸಿದ್ದರಾಮಯ್ಯ ಅವರೇ ಬೆಂಗಳೂರು ಉಸ್ತುವಾರಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಅಂತಿಮ ಘಳಿಗೆಯಲ್ಲಿ ನನಗೆ ಉಸ್ತುವಾರಿ ಸ್ಥಾನ ಸಿಗಲಿಲ್ಲ ಎಂದರು.
ಅಧಿಕಾರ ಸ್ವೀಕರಿಸಿದ ಎರಡೇ ದಿನಕ್ಕೆ ಶಿವಕುಮಾರ್ ಅವರಿಗೆ ಕಸಿವಿಸಿ ಉಂಟಾಗಿದೆ. ಖಾತೆ ಕೊಟ್ಟ ಒಂದೇ ದಿನಕ್ಕೆ ರಾಜೀನಾಮೆ ರಾಮಲಿಂಗಾರೆಡ್ಡಿ ಕೊಟ್ಟಿದ್ದಾರೆ. ಹೊಸ ಸರ್ಕಾರಕ್ಕೆ ಇದು ಮುಜುಗರವನ್ನುಂಟು ಮಾಡಿದೆ.
ಮೇಲಾಗಿ ಇಂದು ಪಕ್ಷದ ವರಿಷ್ಠ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸುತ್ತಿರು ಬೆನ್ನಲ್ಲೇ ರಾಜೀನಾಮೆ ಪ್ರಕರಣ ನಡೆದಿದ್ದು ಮುಖಂಡರಿಗೂ ಮುಜುಗರವನ್ನುಂಟು ಮಾಡಿದೆ.