ರಾಯಚೂರು : ರಾಯಚೂರಲ್ಲಿ ಸಾಧುಗಳ ಸೋಗಿನಲ್ಲಿ ಬಂದು ಸಾರ್ವಜನಿಕರನ್ನು ಯಾಮಾರಿಸಿ ಹಣ ಮತ್ತು ಚಿನ್ನಾಭರಣ ದೋಚುವ ಖತರ್ನಾಕ್ ಗ್ಯಾಂಗ್ ಸಕ್ರಿಯವಾಗಿದೆ. ಸಿಂಧನೂರು ನಗರದಲ್ಲಿ ಇಂತಹದ್ದೇ ಒಂದು ರೋಚಕ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಮೆಡಿಕಲ್ ಶಾಪ್ ಮಾಲೀಕರೊಬ್ಬರು ಈ ಗ್ಯಾಂಗ್ನ ಸಂಚಿಗೆ ಬಲಿಯಾಗಿದ್ದಾರೆ. ಸಿಂಧನೂರಿನ ವೈದ್ಯಕೀಯ ಅಂಗಡಿಗೆ ಸಾಧುಗಳ ಉಡುಪಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಮಾತುಗಳಲ್ಲೇ ಮರುಳು ಮಾಡುವ ಹೈಪೋಟಿಸಂ ವಿದ್ಯೆಯನ್ನು ಬಳಸಿ ಮಾಲೀಕನ ಗಮನ ಬೇರೆಡೆ ಸೆಳೆದಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ನಗದು ಹಣ ಹಾಗೂ ಮಾಲೀಕ ಧರಿಸಿದ್ದ ಚಿನ್ನದ ಒಡವೆಗಳನ್ನು ಅತ್ಯಂತ ಚಾಣಾಕ್ಷತನದಿಂದ ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಖದೀಮರು ಹೋದ ಕೆಲ ಸಮಯದ ಬಳಿಕ ತಮಗೆ ವಂಚನೆಯಾಗಿರುವುದು ಮಾಲೀಕನ ಅರಿವಿಗೆ ಬಂದಿದೆ. ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ವಂಚನೆಯ ದೃಶ್ಯಗಳು ಸೆರೆಯಾಗಿದ್ದು, ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೂವನ್ನ ಮೂಸಿ ಕೆಟ್ಟರು..!
ಸಾಧು ನೀಡಿದ ಆ ಎರಡು ಹೂವುಗಳ ವಾಸನೆ ತಗುಲಿದ ಕೆಲವೇ ಕ್ಷಣಗಳಲ್ಲಿ ಮಾಲೀಕ ಪ್ರಜ್ಞೆ ತಪ್ಪಿದವರಂತೆ, ಮಂಕು ಬಡಿದ ಸ್ಥಿತಿಗೆ ತಲುಪಿದ್ದಾರೆ. ತಮಗೆ ಅರಿವಿಲ್ಲದಂತೆಯೇ ಸಮ್ಮೋಹನಕ್ಕೆ ಒಳಗಾದ ಮಾಲೀಕರು, ಖುದ್ದು ತಾವೇ ತಮ್ಮ ಜೇಬಿನಲ್ಲಿದ್ದ 10 ಸಾವಿರ ರೂಪಾಯಿ ನಗದು ಹಣ ಮತ್ತು ಕೈಯಲ್ಲಿದ್ದ ಬೆಲೆಬಾಳುವ ಬಂಗಾರದ ಉಂಗುರವನ್ನು ಬಿಚ್ಚಿ ಆ ಖದೀಮ ಸಾಧುವಿನ ಕೈಗೆ ಕೊಟ್ಟಿದ್ದಾರೆ. ಹಣ ಮತ್ತು ಚಿನ್ನವನ್ನು ಲೂಟಿ ಮಾಡಿದ ಆ ಸಾಧು, ಅಲ್ಲಿಂದ ಕ್ಷಣಾರ್ಧದಲ್ಲಿ ಕಾಲ್ಕಿತ್ತಿದ್ದಾನೆ. ಕೆಲ ಹೊತ್ತಿನ ಬಳಿಕ ವಿಷ್ಣುದತ್ತು ಅವರು ಸಂಪೂರ್ಣ ಪ್ರಜ್ಞಾವಸ್ಥೆಗೆ ಬಂದಾಗ ತಮಗೆ ವಂಚನೆಯಾಗಿರುವುದು ಅರಿವಾಗಿದೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಕಲಿ ಸಾಧುಗಳ ಪತ್ತೆಗೆ ಬಲೆ ಬೀಸಿದ್ದು, ಅಪರಿಚಿತರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.