ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವೇಂದ್ರ ಚಡ್ಡಾ ಕೊನೆಗೂ ಮೌನ ಮುರಿದಿದ್ದಾರೆ. ಪಕ್ಷವು ಅವರನ್ನು ರಾಜ್ಯಸಭಾ ಉಪನಾಯಕ ಸ್ಥಾನದಿಂದ ತೆಗೆದುಹಾಕಿದ ಬೆನ್ನಲ್ಲೇ, ಮೊದಲ ಬಾರಿಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.ಆಮ್ ಆದ್ಮಿ ಪಕ್ಷ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ರಾಘವ್ ಚಡ್ಡಾ, “ನಮ್ಮನ್ನು ಮೌನಗೊಳಿಸಲಾಗಿದೆ, ಆದರೆ ನಾವು ಸೋತಿಲ್ಲ” ಎಂದು ಹೇಳಿದ್ದಾರೆ.
ಉಪನಾಯಕ ಸ್ಥಾನ ಕಳೆದುಕೊಂಡ ಬಳಿಕ ಮಾತನಾಡಿದ ಅವರು, “ಸಾರ್ವಜನಿಕ ಸಮಸ್ಯೆಗಳನ್ನು ಎತ್ತುವುದು ಅಪರಾಧವಾ? ನಾನು ಜನರ ಸಮಸ್ಯೆಗಳಿಗಾಗಿ ಧ್ವನಿ ಎತ್ತಿದ್ದೇನೆ. ಅದಕ್ಕಾಗಿ ನನ್ನನ್ನು ತಿರಸ್ಕರಿಸಲಾಗಿದೆ” ಎಂದು ಆರೋಪಿಸಿದ್ದಾರೆ. ತಮ್ಮ ವಿಡಿಯೋ ಸಂದೇಶದಲ್ಲಿ ಮಧ್ಯಮ ವರ್ಗದ ಮೇಲಿನ ತೆರಿಗೆ ಹೊರೆ, ಡೇಟಾ ಸಮಸ್ಯೆಗಳು, ಪಿತೃತ್ವ ರಜೆ ಹಕ್ಕು ಮತ್ತು ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ಸಾಮಾನು ಶುಲ್ಕಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಇದಕ್ಕೂ ಮುನ್ನ, ಎಎಪಿ ಪಕ್ಷ ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದು, ರಾಘವ್ ಚಡ್ಡಾ ಅವರನ್ನು ಉಪನಾಯಕ ಸ್ಥಾನದಿಂದ ತೆಗೆದುಹಾಕುವಂತೆ ಹಾಗೂ ಸದನದಲ್ಲಿ ಮಾತನಾಡುವ ಅವಕಾಶ ನಿರ್ಬಂಧಿಸುವಂತೆ ಮನವಿ ಮಾಡಿತ್ತು. ಅವರ ಬದಲಿಗೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ಪ್ರಸ್ತಾಪಿಸಿತ್ತು.
ಒಂದು ಕಾಲದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತರಾಗಿದ್ದ ಚಡ್ಡಾ, ಇತ್ತೀಚಿನ ದಿನಗಳಲ್ಲಿ ಪಕ್ಷದ ನಾಯಕತ್ವದೊಂದಿಗೆ ಅಂತರ ಹೊಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.ಈ ಘಟನೆ ಎಎಪಿಯ ಒಳಗಿನ ಅಸಮಾಧಾನವನ್ನು ಮತ್ತೊಮ್ಮೆ ಬಹಿರಂಗಗೊಳಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಘವ್ ಚಡ್ಡಾ ಬಿಡುಗಡೆ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.