ಮಂಡ್ಯ: ರಾಜ್ಯದಲ್ಲಿ ಪ್ರತಿದಿನ ಪ್ರತಿಭಟನೆಗಳು, ಹಗರಣಗಳು, ಕುರ್ಚಿ ಕಾಳಗ, ಆಡಳಿತ ಪಕ್ಷದ ಶಾಸಕರ ಬ್ರೇಕ್ಫಾಸ್ಟ್ ಹಾಗೂ ಡಿನ್ನರ್ ಮೀಟಿಂಗ್ಗಳೇ ಸರ್ಕಾರದ ಸಾಧನೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಸಾವಿರ ದಿನಗಳನ್ನು ಪೂರೈಸಿದೆ. ಗ್ಯಾರಂಟಿಯಿಂದ ದಿವಾಳಿಯಾಗಿರುವ ಈ ಸರ್ಕಾರವು ಕರ್ನಾಟಕವನ್ನು ‘ಪಾಪರ್’ ಆಗಿ ಮಾಡಲು ತೀರ್ಮಾನಿಸಿದೆ. ಕೇವಲ ಎರಡು ಮುಕ್ಕಾಲು ವರ್ಷಗಳ ಅವಧಿಯಲ್ಲಿಯೇ ರೂ.3.15 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಐದು ವರ್ಷದ ಕೊನೆಗೆ ಪ್ರತಿ ಸಾರ್ವಜನಿಕನ ತಲೆ ಮೇಲೆ ತಲಾ ರೂ.1 ಲಕ್ಷ ಸಾಲದ ಹೊರೆ ಹೊರೆಸುತ್ತಾರೆ ಎಂದು ಆಪಾದಿಸಿದರು.
ಕಾಂಗ್ರೆಸ್ ನವರು ಶೇ. 40ರಷ್ಟು ಭ್ರಷ್ಟಾಚಾರವೆಂದು ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದ್ದರು. ಆದರೆ ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಮೂರು ಪಟ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಗುತ್ತಿಗೆದಾರರೇ ದೂರಿದ್ದಾರೆ ಎಂದು ಆಪಾದಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸಿಗುತ್ತಿಲ್ಲ, ಮಾ.12ರಂದು ವೈದ್ಯರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮುಷ್ಕರ ನಡೆದರೆ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಬೇಕಾಗುತ್ತದೆ. ರೋಗಿಗಳು ಪರದಾಡುತ್ತಾರೆ. ಔಷಧ ಜೊತೆಗೆ ವೈದ್ಯರು ಇಲ್ಲದಿರುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ದೂರಿದರು.
ಮಂತ್ರಿಗಳ ಸೀಟು ಅಲುಗಾಡುತ್ತಿದೆ:
ಮುಖ್ಯಮಂತ್ರಿ ಸೀಟು ಸೇರಿದಂತೆ ಮಂತ್ರಿಗಳ ಸೀಟು ಅಲುಗಾಡುತ್ತಿದೆ. ಈಗ ಐದು ರಾಜ್ಯಗಳ ಚುನಾವಣೆ ನಡೆಯುತ್ತಿದೆ, ಹಣ ಒದಗಿಸುವುದರಲ್ಲಿ ಡಿ.ಕೆ. ಶಿವಕುಮಾರ್ ಎಕ್ಸ್ಪರ್ಟ್ ಇದ್ದಾರೆ. ಸಚಿವ ಸಂಪುಟ ಪುನರ್ ರಚನೆಯಾದರೆ, ಮಂತ್ರಿ ಸ್ಥಾನಕ್ಕೆ ರೇಟ್ ಫಿಕ್ಸ್ ಆಗುತ್ತದೆ. ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳಕ್ಕೆ ಹಣ ಕಳುಹಿಸಲು ಜಾರ್ಜ್, ದಿನೇಶ್ ಗುಂಡೂರಾವ್ ಅವರನ್ನೇ ಉಸ್ತುವಾರಿ ಹಾಕಲಾಗಿದೆ. ಏಕೆಂದರೆ ಹಣ ಕೊಡಲು ದೇಶದಲ್ಲಿ ಉಳಿದಿರುವುದೊಂದೇ ಕರ್ನಾಟಕ ಎಂದು ಅವರು ಆರೋಪಿಸಿದರು.