ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸಿದ್ದಾರೆ. ಹೈಕಮಾಂಡ್ ಸೂಚಿಸಿದಾಗ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ನಿನ್ನೆ ಹೈಕಮಾಂಡ್ ನವರು ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು. ಆ ಪ್ರಕಾರ ರಾಜೀನಾಮೆ ನೀಡಿದ್ದೇನೆ. ರಾಜ್ಯಪಾಲರು ಬೆಂಗಳೂರಿಗೆ ಬಂದ ನಂತರ ನನ್ನ ರಾಜೀನಾಮೆ ಅಂಗೀಕರಿಸಲಿದ್ದಾರೆ ಎಂದು ಹೇಳಿದರು.ಲೋಕಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಡಾ.ಪರಮೇಶ್ವರ್, ಕೆ.ಜೆ.ಜಾರ್ಜ್, ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಸೇರಿ ಹಲವು ಸಚಿವರು ಭಾಗಿಯಾಗಿದ್ದರು.
ರಾಜೀನಾಮೆ ಸಂವಿಧಾನಬದ್ಧವಾಗಿದೆ ಎಂದು ಭಾವಿಸುತ್ತೇನೆ. ವರನಟ ರಾಜ್ ಕುಮಾರ್ ಅಭಿಮಾನಿ ದೇವರು ಅಂತಿದ್ರು. ನಾನು ರಾಜಕಾರಣಿ. ಸಂವಿಧಾನವೇ ಧರ್ಮ ಎನ್ನುವವನು. ಮತದಾರರು ನಮ್ಮ ಅಭಿಮಾನಿ ದೇವರು ಎಂದರು.
ಕರ್ನಾಟಕದ 7 ಕೋಟಿ ಜನರಿಗೆ ಸೇವೆ ಸಲ್ಲಿಸುವ ಅವಕಾಶ ಲಭಿಸಿತ್ತು. 2 ಬಾರಿ ಮುಖ್ಯಮಂತ್ರಿ ಆಗಿ ಕೆಲಸ ಮಾಡುವ ಅವಕಾಶ ದೊರಕಿದೆ. 2 ಬಾರಿ ವಿಪಕ್ಷ ನಾಯಕನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿದೆ. ಈ ಅವಕಾಶ ಕೊಟ್ಟ ಸೋನಿಯಾ ಗಾಂಧಿ ಮತ್ತು ಖರ್ಗೆಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮುಂದಿನ ಮುಖ್ಯಮಂತ್ರಿಗೆ ಅವಕಾಶ ಮಾಡಿಕೊಡಬೇಕಿದೆ ಎಂದೂ ಹೇಳಿದರು.
ಮಾತನಾಡುತ್ತಲೇ ಭಾವುಕರಾದ ಸಿದ್ದರಾಮಯ್ಯ ಅವರು, ರಾಜಕೀಯ ಜೀವನದ ಬಗ್ಗೆ ಮಾತನಾಡುತ್ತಾ ಗದ್ಗದಿತರಾದರು. ನಾನು ಹಳ್ಳಿಗಾಡಿನಿಂದ ಬಂದವನು. ನನಗೆ ಅಂಬೇಡ್ಕರ್, ಬಸವಣ್ಣನವರು ಆದರ್ಶ ಪ್ರಾಯ. ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ. ಸಮಾನತೆಯ ಸಮಾಜ, ಸಮಾನ ಅವಕಾಶ ಸಿಗಬೇಕು. ಅಸಮಾನತೆ ತೊಲಗಬೇಕಾದರೆ ಸಮಾನ ಅವಕಾಶ ಸಿಗಬೇಕು ಎಂದರು.