ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ಏರುತ್ತಿದೆ. ಐಹೊಳೆ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಸಿಎಂ ಅವರ ಆಹಾರ ಪದ್ಧತಿಯನ್ನು ಗುರಿಯಾಗಿಸಿಕೊಂಡು ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, "ಸಿದ್ದರಾಮಯ್ಯ ಅವರು ಯುಗಾದಿ ಹಬ್ಬದಂದೂ ಮಾಂಸ ತಿನ್ನುತ್ತೇನೆ ಎನ್ನುತ್ತಾರೆ. ಸಿದ್ರಾಮಣ್ಣ, ನೀವು ಮಾಂಸನಾದರೂ ತಿನ್ನಿ ಅಥವಾ ಸುನ್ನತ್ ಆದರೂ ಮಾಡಿಸಿಕೊಳ್ಳಿ, ಅದು ನಿಮ್ಮ ವೈಯಕ್ತಿಕ. ಆದರೆ ಹಬ್ಬದ ದಿನಗಳಲ್ಲಿ ಇಂತಹ ಹೇಳಿಕೆ ನೀಡುವುದು 15% ಇರುವ ಮುಸ್ಲಿಮರನ್ನು ಓಲೈಸಲು ಮಾತ್ರ" ಎಂದು ಟೀಕಿಸಿದರು.
ಮುಂದುವರಿದು ಮಾತನಾಡಿದ ಅವರು, "ರಾಜ್ಯದಲ್ಲಿ 85% ಹಿಂದೂಗಳಿದ್ದರೂ ಗೌಡ, ಲಿಂಗಾಯತ, ಕುರುಬ, ವಾಲ್ಮೀಕಿ, ದಲಿತ ಎಂದು ಜಾತಿಗಳ ಹೆಸರಿನಲ್ಲಿ ನಾವು ಹರಿದು ಹಂಚಿ ಹೋಗಿದ್ದೇವೆ. ನಮ್ಮ ಅಸ್ತಿತ್ವ ಉಳಿಯಬೇಕೆಂದರೆ ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕು" ಎಂದು ಸಮಾಜವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಗುಡುಗಿದರು. ಬಾಗಲಕೋಟೆ ಉಪಸಮರದಲ್ಲಿ ಈಗ ಅಭಿವೃದ್ಧಿಗಿಂತ ಹೆಚ್ಚಾಗಿ ಧರ್ಮ ಮತ್ತು ಜಾತಿಯ ರಾಜಕಾರಣ ಮುನ್ನೆಲೆಗೆ ಬಂದಿದ್ದು, ಪ್ರತಾಪ್ ಸಿಂಹ ಭಾಷಣಕ್ಕೆ ಆಡಳಿತ ಪಕ್ಷ ಕಾಂಗ್ರೆಸ್ ಹೇಗೆ ತಿರುಗೇಟು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.