ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಎಐಎಡಿಎಂಕೆ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಉಂಟಾಗಿದೆ.ಆಡಳಿತಾರೂಢ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಒಂದು ಬಣ ಪ್ರತಿಪಾದಿಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷ ಹೋಳಾಗುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ.
234 ಕ್ಷೇತ್ರಗಳ ಪೈಕಿ 167ರಲ್ಲಿ ಸ್ಪರ್ಧಿಸಿದ್ದ ಎಐಎಡಿಎಂಕೆ, 47 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.
ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ಧ ಒಂದು ಬಣದ ಶಾಸಕರು ತಿರುಗಿ ಬಿದ್ದಿದ್ದಾರೆ. ಕಳಪೆ ಸಾಧನೆ ಹಿನ್ನೆಲೆಯಲ್ಲಿ ಪಳನಿಸ್ವಾಮಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಇತ್ತೀಚೆಗೆ ಶಾಸಕರೊಂದಿಗೆ ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಶಾಸಕರಾದ ಷಣ್ಮುಗಂ, ವೇಲುಮಣಿ ಮತ್ತು ಅವರ ಬೆಂಬಲಿಗರು ಗೈರಾಗಿದ್ದರು. ಇವರ ಗುಂಪು ವಿಜಯ್ ಬೆಂಬಲಿಸಬೇಕು ಎಂದು ಒತ್ತಡ ಹೇರುತ್ತಿದೆ.
ಪಕ್ಷದಲ್ಲಿ ಪ್ರಬಲ ನಾಯಕರು ಇಲ್ಲದ ಕಾರಣ ಡೋಲಾಯಮಾನ ಪರಿಸ್ಥಿತಿ ಉಂಟಾಗಿದೆ. ಭಿನ್ನಮತ ಶೀಘ್ರ ಬಗೆಹರಿಯದಿದ್ದರೆ ಎರಡು ಎಲೆ ಚಿನ್ಹೆ ಹೊಂದಿರುವ ಎಐಎಡಿಎಂ ಪಕ್ಷದಲ್ಲಿ ಒಂದು ಎಲೆಯ ಗುಂಪು ಕಳಚಿಕೊಂಡರೂ ಅಚ್ಚರಿ ಇಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.