ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಚಾಕೊಲೇಟ್ ನೀಡುತ್ತಿರುವುದು ವಿದೇಶಿ ನಾಯಕರಿಗೆ ಮಾತ್ರವಲ್ಲ, ಕಳೆದ 13 ವರ್ಷಗಳಿಂದ ಭಾರತಿಯರಿಗೂ ಬಗೆಬಗೆಯ, ಬಣ್ಣಬಣ್ಣದ ಚಾಕ್ಲೇಟ್ ನೀಡಿದ್ದಾರೆ ಮತ್ತು ನೀಡುತ್ತಲೇ ಇದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪ್ರಧಾನಿ ಮೋದಿ ದೇಶದ ಜನರಿಗೆ ಹೇಗೆ ಚಾಕೊಲೇಟ್ ಕೊಡುತ್ತಾ ಬಂದಿದ್ದಾರೆ ವಿವರಿಸಿದ್ದಾರೆ.
ಮಕ್ಕಳು ಅಳುವಾಗ ಹೇಗೆ ಚಾಕ್ಲೇಟ್ ನೀಡಿ ಸಮಾಧಾನಿಸುತ್ತಾರೋ ಹಾಗೆಯೇ, ದೇಶದ ಜನ ಸಮಸ್ಯೆಗಳಲ್ಲಿರುವಾಗ ಘೋಷಣೆಗಳೆಂಬ ಚಾಕ್ಲೇಟ್ ನೀಡಿ ಸಮಾಧಾನಿಸುವ ಕೆಲಸ ಮಾಡಿದ್ದಾರೆ! ಭಾರತೀಯರು ಈ ಕನಸೆನ್ನುವ ಚಾಕ್ಲೇಟ್ ಗಳನ್ನು ಸವಿಯುತ್ತಾ, ಸಮಾಧಾನಗೊಳ್ಳಬೇಕು!
ಗುಜರಾತ್ ಮಾಡೆಲ್; ಅಚ್ಚೇದಿನ್; ವಿಶ್ವಗುರು; ಮೇಕ್ ಇನ್ ಇಂಡಿಯಾ; ಖೇಲೋ ಇಂಡಿಯಾ
ಅಮೃತ್ ಕಾಲ್; ವಿಕಸಿತ್ ಭಾರತ್; ಸ್ಟಾರ್ಟ್ ಅಪ್ ಇಂಡಿಯಾ; ಸ್ಕಿಲ್ ಇಂಡಿಯಾ; ಆತ್ಮ ನಿರ್ಭರ ಭಾರತ್
ಬೇಟಿ ಬಚಾವೋ, ಬೇಟಿ ಪಡಾವೋ; ಖೇಲೋ ಇಂಡಿಯಾ;20 ಲಕ್ಷ ಕೋಟಿ ಪ್ಯಾಕೇಜ್
ಹೀಗೆ, ಮೋದಿಯವರು ಭಾರತೀಯರಿಗೆ ಕೊಟ್ಟಿರುವ ಘೋಷಣೆಗಳೆಂಬ ಚಾಕ್ಲೇಟ್ ಹಲವಾರು! ಪ್ರತಿ ಚುನಾವಣೆಗೊಂದು ಘೋಷಣೆ, ಪ್ರತಿ ವರ್ಷಕ್ಕೊಂದು ಘೋಷಣೆ, ಪ್ರತಿ ವೈಫಲ್ಯಕ್ಕೊಂದು ಘೋಷಣೆ, ಇವುಗಳು ವಾಸ್ತವವಾಗಿದ್ದು ಮಾತ್ರ ಸೊನ್ನೆ. ಭಾರತೀಯರಿಗೆ ಹುಸಿ ಸಂತೋಷವನ್ನು ನೀಡುವ ಈ ಚಾಕ್ಲೇಟ್ ಗಳು ಈಗ ಸಲಹೆಗಳೆಂಬ ಹೊಸ ರೂಪಕ್ಕೆ ತಿರುಗಿವೆ..
ಅಡುಗೆಗೆ ಎಣ್ಣೆ ಬಳಸಬೇಡಿ, ಪೆಟ್ರೋಲ್ ಬಳಕೆ ಕಡಿಮೆಗೊಳಿಸಿ, ಗ್ಯಾಸ್ ಬದಲು ಗಟರ್ ಗ್ಯಾಸ್ ಬಳಸಿ, ವರ್ಕ್ ಫ್ರಮ್ ಹೋಮ್ ಮಾಡಿ, ಬ್ಯುಟಿ ಪಾರ್ಲರ್ ಗೆ ಹೋಗಬೇಡಿ, ರಾಸಾಯನಿಕ ಗೊಬ್ಬರ ಬಳಸದೆ ಕೃಷಿ ಮಾಡಿ, ಇತ್ಯಾದಿ....
ಸಿಹಿ ಚಾಕ್ಲೇಟ್ ನೀಡುತ್ತಿದ್ದ ಮೋದಿಯವರು ಈಗ ಭಾರತೀಯರಿಗೆ ಕಹಿ ಚಾಕ್ಲೇಟ್ ನೀಡಲು ಶುರು ಮಾಡಿದ್ದಾರೆಂದರೆ, ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದೇ ಅರ್ಥ ಎಂದು ಲೇವಡಿ ಮಾಡಿದ್ದಾರೆ.